ದಾವಣಗೆರೆ: ಎನ್ಎಡಿಸಿಪಿ ಕಾರ್ಯಕ್ರಮದಡಿ ಜಾನುವಾರುಗಳಿಗೆ ಕಂದುರೋಗ ನಿಯಂತ್ರಣ ಕಾರ್ಯಕ್ರಮವನ್ನು ಸೆ.9 ರಿಂದ ಸೆ.15 ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಗೆ 4 ತಿಂಗಳಿಂದ 8 ತಿಂಗಳೊಳಗಿನ 40 ಸಾವಿರ ಹೆಣ್ಣು ಕರುಗಳಿಗೆ ಮಾತ್ರ ಒಂದೇ ಬಾರಿ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಪಶುಸಂಗೋಪನೆಯ ಇಲಾಖೆಯ ವತಿಯಿಂದ ಗೋಶಾಲೆ ಆರಂಭಿಸುವ ಸಂಬಂಧ ಜರುಗಿದ ಸಭೆಯಲ್ಲಿ ಮಾತನಾಡಿದರು. ಕಂದುರೋಗವು ಪ್ರಾಣಿಜನ್ಯ ರೋಗವಾಗಿದ್ದು, ರೋಗಗ್ರಸ್ತ ಜಾನುವಾರುಗಳು ಗರ್ಭಾವಸ್ಥೆಯ 6ನೇ ತಿಂಗಳಿನ ನಂತರ ಕಂದುಹಾಕುವ ಸಾಧ್ಯತೆ ಇರುವುದರಿಂದ, ಗರ್ಭಸ್ರಾವ, ಸತ್ತೆಯ ಮೂಲಕ ಮತ್ತು ಹಸಿ ಹಾಲನ್ನು ಕಾಯಿಸದೇ ಬಳಸುವುದರಿಂದ, ಅದರ ಸಂಪರ್ಕದಲ್ಲಿ ಬರುವ ಮಾನವರಿಗೂ ರೋಗ ಬರುವ ಸಾಧ್ಯತೆ ಇರುತ್ತದೆ. ಸೋಂಕಿತ ಜಾನುವಾರುಗಳಲ್ಲಿ ಪದೇ ಪದೇ ಜ್ವರ ಕಾಣಿಸಿಕೊಳ್ಳುವುದು, ಮೇವು ತಿನ್ನುವುದನ್ನು ಕಡಿಮೆ ಮಾಡುವುದು, ಹಾಲು ಉತ್ಪಾದನೆ ಕಡಿಮೆ ಮಾಡುವುದು ಮತ್ತು 6 ತಿಂಗಳ ಗರ್ಭಾವಸ್ಥೆ ನಂತರ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಇದರಿಂದ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 20352 ಕೋಟಿ ಆರ್ಥಿಕ ನಷ್ಟ ಉಂಟಾಗುವುದನ್ನು ಅಂದಾಜಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಮಹಾವೀರ್ ಜೈನ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ತಾಲ್ಲೂಕು ಸಹಾಯಕ ನಿರ್ದೇಶಕರು, ತಾಂತ್ರಿಕ ಸಹಾಯಕ ವೀರೇಶ್ ಉಪಸ್ಥಿತರಿದ್ದರು.



