ದಾವಣಗೆರೆ: ಕೃಷಿಯಲ್ಲಿ ಅತಿಯಾದ ರಸಾಯನಿಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಕುಗ್ಗುವುದರ ಜೊತೆಗೆ ಪರಿಸರದಲ್ಲಿರುವ ಉಪಯುಕ್ತ ಕೀಟಗಳ ಸಂತತಿ ನಾಶ ಮಾಡುತ್ತದೆ. ಹೀಗಾಗಿ ರಸಾಯನಿಕಗಿಂತ ಜೈವಿಕ ಆಧಾರಿತ ಸಸ್ಯ ಸಂರಕ್ಷಣಾ ಕ್ರಮಗಳು ಪರಿಸರ ಪೂರಕ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿಯಾದ ಶ್ರೀ ಬಸವನಗೌಡ ಎಂ.ಜಿ. ರವರು ಅಭಿಪ್ರಾಯಪಟ್ಟರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಹಾಗೂ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ, ಬೆಂಗಳೂರು ಇವರ ವತಿಯಿಂದ ಜಗಳೂರು ತಾಲ್ಲೂಕು ಕಲ್ಲೇದೇವರಪುರ ಗ್ರಾಮದಲ್ಲಿ ಹಮ್ಮಿಕೊಂಡ “ಕೃಷಿಯಲ್ಲಿ ಜೈವಿಕ ನಿಯಂತ್ರಣ” ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಸುಡೋಮೊನಾಸ್, ರೈಜೋಬಿಯಂಗಳನ್ನು ಬೀಜೋಪಚಾರದ ಜೊತೆಗೆ ಬಳಸಬಹುದು ಹಾಗೆಯೇ ಮೋಹಕ ಬೆಳೆ ಮತ್ತು ಬಲೆಗಳನ್ನು ತರಕಾರಿ ಬೆಳೆಗಳಲ್ಲಿ ಉಪಯೋಗಿಸುವುದರಿಂದ ಪರಿಸರ ಪೂರಕ ನಿಯಂತ್ರಣ ಸಾಧ್ಯವಿದೆ ಎಂದು ತಿಳಿಸಿದರು.
ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಅವಿನಾಶ್ ಟಿ.ಜಿ. ಮಾತನಾಡಿ, ಹತ್ತಿ ಮತ್ತು ಮೆಕ್ಕೆಜೋಳಗಳಲ್ಲಿ ಟ್ರೈಕೋಕಾರ್ಡ್ ಮೊಟ್ಟೆಗಳ ಚೀಟಿಯನ್ನು ಕಟ್ಟುವುದರಿಂದ ಮೆಕ್ಕೆಜೋಳದಲ್ಲಿ ಲದ್ಧಿಹುಳದ ನಿಯಂತ್ರಣ ಹಾಗೂ ಹತ್ತಿಯಲ್ಲಿ ಕಾಯಿಕೊರಕದ ನಿಯಂತ್ರಣವನ್ನು ಜೈವಿಕ ವಿಧಾನದಿಂದ ಮಾಡಬಹುದೆಂದರು. ಬಳಿಕ ರೈತರ ಹೊಲಗಳಲ್ಲಿ ಟ್ರೈಕೋಕಾರ್ಡ್ ಚೀಟಿಗಳನ್ನು ಪದ್ಧತಿ ಪ್ರಾತ್ಯಕ್ಷಿಕೆಯ ಮೂಲಕ ಕಟ್ಟುವ ವಿಧಾನವನ್ನು ತೋರಿಸಲಾಯಿತು. ಕಾರ್ಯಕ್ರಮದಲ್ಲಿ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಕೃಷ್ಣಮೂರ್ತಿ ಹಾಗೂ 20ಕ್ಕೂ ಹೆಚ್ಚು ರೈತರು ಇದ್ದರು.



