ದಾವಣಗೆರೆ: ತರಕಾರಿ ಬೆಳೆಗಳಲ್ಲಿ ಗುಣಮಟ್ಟದ ಫಸಲು ಪಡೆಯಲು ಮತ್ತು ಇಳುವರಿ ಹೆಚ್ಚಿಸಲು ಲಘುಪೋಷಕಾಂಶದ ಬಳಕೆ ಅಗತ್ಯ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ತಿಳಿಸಿದರು.
ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಗ್ರಾಮದಲ್ಲಿ ಕೇಂದ್ರದಿಂದ ಹಮ್ಮಿಕೊಂಡಿದ್ದು ಟೊಮ್ಯಾಟೋ ಬೆಳೆಯಲ್ಲಿ ಕ್ಷೇತ್ರ ಪ್ರಯೋಗದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತರಕಾರಿ ಬೆಳೆಗಳಲ್ಲಿ ಮುಖ್ಯ ಪೋಷಕಾಂಶಗಳು ಬೆಳವಣಿಗೆಯ ಹಂತಕ್ಕೆ ಉಪಯೋಗವಾದರೆ ಲಘು ಪೋಷಕಾಂಶಗಳು ಬೆಳೆಗಳಲ್ಲಿ ಹೂ ಕಟ್ಟುವಿಕೆ. ಕಾಯಿಗಳ ಸಂಖ್ಯೆ, ಗುಣಮಟ್ಟ ಮತ್ತು ಇಳುವರಿಯನ್ನು ನಿರ್ಧರಿಸುವ ಪಾತ್ರವನ್ನುವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಸಮುದ್ರ ಕಳೆಯಿಂದ ತೆಗೆದಿರುವ ಸತ್ವದ ಅಂಶವನ್ನು ಬೆಳೆಗಳಿಗೆ ಸಿಂಪಡಿಸುವುದರಿಂದ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ ಜೊತೆಗೆ ವಾತಾವರಣದ ಅತೀವೃಷ್ಠಿ ಮತ್ತು ಅನಾವೃಷ್ಠಿಗಳಿಗೆ ನಿರೋಧಕ ಶಕ್ತಿ ಒದಗಲು ಕಾರಣವಾಗುತ್ತದೆ ಎಂದು ತಿಳಿಸಿದರು.
ತರಕಾರಿ ಸ್ಪೆಷಲ್ನ್ನು 5 ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಟೊಮ್ಯಟೋ ನಾಟಿ ಮಾಡಿದ 30, 45 ಮತ್ತು 60 ದಿನಗಳಲ್ಲಿ ಸಿಂಪಡಿಸಬೇಕು. ಇದರಿಂದ ಬೆಳೆ ಉತ್ತಮವಾಗಿ ಹೂ ಕಟ್ಟಲು ಅನುಕೂಲವಾಗುವುದಲ್ಲದೆ ಪರಾಗಸ್ಪರ್ಷ ಕ್ರಿಯೆಯು ಹೆಚ್ಚಾಗಿ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಿದರು.



