ದಾವಣಗೆರೆ: ನರ್ಸಿಂಗ್ ಮರು ಪರೀಕ್ಷೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ನಗರದ ಜಯದೇವವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಡಿ. 22 ರಂದು ನರ್ಸಿಂಗ್ ಪರೀಕ್ಷೆಗಳು ಪ್ರಾರಂಭವಾಗಿ ಡಿ. 25 ರವರೆಗೆ ಮುಕ್ತಾಯವಾಗಿದೆ. 88000 ವಿದ್ಯಾರ್ಥಿಗಳು ಶ್ರಮಪಟ್ಟು. ಓದಿ ಪರೀಕ್ಷೆಗಳನ್ನು ಬರೆದಿದ್ದಾರೆ ಆದರೆ ಬೆಂಗಳೂರಿನ ಬಾಣಸವಾಡಿಯಲ್ಲಿರುವ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ನಕಲು ನಡೆದಿದೆ ಎಂದು ಮರು ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ವಿದ್ಯಾರ್ಥಿಗಳು ತುಂಬಾ ಶ್ರಮಪಟ್ಟು, ನಿದ್ದೆಗೆಟ್ಟು ಪರೀಕ್ಷೆಗಳನ್ನು ಬರೆದಿರುತ್ತಾರೆ. ಏಕಾಏಕಿ ಮರುಪರೀಕ್ಷೆ ಮಾಡುವುದರಿಂದ ಇಂಥ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಈಗ ಪರೀಕ್ಷೆ ಬರೆಯಲು ಜ. 21-ರಂದು ದಿನಾಂಕ ನಿಗದಿ ಮಾಡಲಾಗಿದೆ. ಆದರೆ ಕೋರ್ಟ್ ಇದಕ್ಕೆ ಸಮ್ಮತಿ ಕೊಟ್ಟಿರುವುದಿಲ್ಲ. ಮಕ್ಕಳ ಆಸಕ್ತಿಯ ಮೇರೆಗೆ ಮರುಪರೀಕ್ಷೆ ನಡೆಸುವಂತೆ ಆದೇಶ ನೀಡಿರುತ್ತದೆ.
ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ನೀಡದೇ, ಸಲಹೆ ಪಡೆಯದೇ ಏಕಾಏಕಿ ಕೆಎಸ್ಡಿಎನ್ ಬೋರ್ಡಿನವರು ಈ ರೀತಿ ದಿಡೀರನೇ ದಿನಾಂಕ ಗೊತ್ತುಮಾಡಿ ಮರುಪರೀಕ್ಷೆ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ, ಪ್ರಾಮಾಣಿಕವಾಗಿ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಆದರಿಂದ ಈ ಮರುಪರೀಕ್ಷೆಯ ಅಗತ್ಯವಿರುವುದಿಲ್ಲ. ಯಾವ ಪರೀಕ್ಷಾ ಕೇಂದ್ರದಲ್ಲಿ ನಕಲು ನಡೆದಿದೆಯೋ ಆ ಪರೀಕ್ಷಾ ಕೇಂದ್ರಗಳ ವಿದ್ಯಾರ್ಥಿಗಳಿಗೆ ಮಾತ್ರ ಮರು ಪರೀಕ್ಷೆ ನಡೆಯಲಿ ಎಂಬುದು ಪ್ರಾಮಾಣೀಕವಾಗಿ ಬರೆದ ಎಲ್ಲಾ ವಿದ್ಯಾರ್ಥಿಗಳ ಅಳಲಾಗಿದೆ. ಆದ್ದರಿಂದ ಈ ಮರುಪರೀಕ್ಷೆಯನ್ನು ರದ್ದುಪಡಿಸಿ ಪ್ರಾಮಾಣೀಕವಾಗಿ ಬರೆದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಕೊಳ್ಳೇರ, ವರುಣ್, ಶಶಾಂಕ್,ಶಿವಕುಮಾರ್, ರಘು, ಸಿದ್ದೇಶ್, ಅನುಷಾ ಮತ್ತಿತರರಿದ್ದರು.



