ದಾವಣಗೆರೆ: ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಸತತ ಮಳೆಗೆ ಜನರು ಹೈರಾಣಾಗಿದ್ದಾರೆ. ನಿರಂತರ ಮಳೆಯಿಂದ ಜಿಲ್ಲೆಯ ವಿವಿಧ ಕಡೆ 15ಕ್ಕೂ ಹೆಚ್ಚು ಮನೆಗಳು ನೆಲಕ್ಕುರುಳಿವೆ. ರೈತರು ಬಿತ್ತಿದ ಪೈರುಗಳು ಶೀತಕ್ಕೆ ತುತ್ತಾಗಿದ್ದು, ಮಳೆ ನಿಲ್ಲುವಂತೆ ರೈತರು ಪ್ರಾರ್ಥಿಸುವ ಸ್ಥಿತಿ ನಿರ್ಮಾಣವಾಗಿದೆ.
ಜ.25 ರಂದು ಜಿಲ್ಲೆಯಲ್ಲಿ 13.3 ಮಿ.ಮೀ. ಸರಾಸರಿ ಮಳೆಯಾಗಿದೆ. ಅಧಿಕ ಮಳೆಯಿಂದ ರೂ. 19.29 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ರೀತಿ ಇದೆ. ಚನ್ನಗಿರಿ 14.8 ಮಿ.ಮೀ, ದಾವಣಗೆರೆ 16.5 ಮಿ.ಮೀ, ಹರಿಹರ 15.4 ಮಿ.ಮೀ, ಹೊನ್ನಾಳಿ 11.8 ಮಿ.ಮೀ, ಜಗಳೂರು 5.6 ಮಿ.ಮೀ, ನ್ಯಾಮತಿ 19.5 ಮಿ.ಮೀ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 6 ಮನೆಗಳು ಭಾಗಶಃ ಹಾನಿಯಾಗಿದ್ದು ರೂ. 1.80 ಲಕ್ಷ ಹಾಗೂ ಒಂದು ದನದ ಕೊಟ್ಟಿಗೆ ಹಾನಿಯಾಗಿ ರೂ.10 ಸಾವಿರ ಅಂದಾಜು ನಷ್ಟ ಸಂಭವಿಸಿದೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 6 ಮನೆ ಭಾಗಶಃ ಹಾನಿಯಾಗಿದ್ದು ರೂ. 1.80 ಲಕ್ಷ ಅಂದಾಜು ನಷ್ಟ ಹಾಗೂ 1 ದನದ ಕೊಟ್ಟಿಗೆ ಹಾನಿಯಾಗಿ 10 ಸಾವಿರ ಅಂದಾಜು ನಷ್ಟ ಸಂಭವಿಸಿದೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 3 ಮನೆಗಳು ಭಾಗಶಃ ಹಾನಿಯಾಗಿದ್ದು ರೂ. 19.5 ಸಾವಿರ ಹಾಗೂ 1 ಎಕರೆ ಬೆಳೆ ಹಾನಿಯಾಗಿ ಅಂದಾಜು ರೂ.50 ಸಾವಿರದಷ್ಟು ನಷ್ಟ ಸಂಭವಿಸಿದೆ.
ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಮನೆ ತೀವ್ರ ಹಾನಿಯಾಗಿದ್ದು ಅಂದಾಜು ರೂ.1.90 ಲಕ್ಷ ಹಾಗೂ 2 ಮನೆ ಭಾಗಶಃ ಹಾನಿಯಾಗಿದ್ದು ರೂ. 1.10 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು, ರೂ. 50 ಸಾವಿರ ಅಂದಾಜು ನಷ್ಟ ಸಂಭವಿಸಿರುತ್ತದೆ. ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 4 ಮನೆ ತೀವ್ರ ಹಾನಿಯಾಗಿದ್ದು ಅಂದಾಜು ರೂ.8.10 ಲಕ್ಷ ಹಾಗೂ 3 ಮನೆ ಭಾಗಶಃ ಹಾನಿಯಾಗಿದ್ದು, ರೂ. 1.20 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಜಿಲ್ಲೆಯಲ್ಲಿ ಒಟ್ಟಾರೆ ರೂ.19.295 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



