ಬೆಂಗಳೂರು: ಬ್ರಿಟನ್ನಿಂದ ಬಂದ 1614 ಮಂದಿಗೂ ಕೋವಿಡ್ ಟೆಸ್ಟ್ಗೊಳಪಡಿಸಲಾಗಿತ್ತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಬ್ರಿಟನ್ ಮಾದರಿಯ ಸೋಂಕು ರಾಜ್ಯದ ಮೂವರಲ್ಲಿ ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದರು.
ಬ್ರಿಟನ್ನಿಂದ ಕರ್ನಾಟಕಕ್ಕೆ ಆಗಮಿಸಿ ಕೋವಿಡ್ ಟೆಸ್ಟ್ಗೆ ಒಳಗಾಗದೆ ತಲೆಮರೆಸಿಕೊಂಡಿರುವವರು ಎಲ್ಲೆ ಇದ್ದರೂ ತಕ್ಷಣವೇ ಚಿಕಿತ್ಸೆಗೆ ಒಳಪಡಬೇಕು. ನೀವು ಈ ರೀತಿಯಾಗಿ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಕಣ್ಮರೆಯಾದರೆ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡಬಹುದು. ತಕ್ಷಣವೇ ಪರೀಕ್ಷೆಗೊಳಪಡಿ ಎಂದು ಮನವಿ ಮಾಡಿದರು. ಈಗಾಗಲೇ ಗೃಹ ಇಲಾಖೆ ಅಧಿಕಾರಿಗಳ ಜೊತೆ ನಾನು ಮಾತುಕತೆ ನಡೆಸಿದ್ದೇನೆ. 48 ಗಂಟೆಗಳ ಒಳಗೆ ಪತ್ತೆ ಮಾಡುವುದಾಗಿ ಹೇಳಿದ್ದಾರೆ.
ನಿಮಗೆ ಎಲ್ಲಿ ಬೇಕೊ ಅಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಒಂದು ವೇಳೆ ಯಥಾಸ್ಥಿತಿ ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದರು.26 ಮಂದಿಯನ್ನು ಈಗಾಗಲೇ ಐಸೋಲೇಟ್ ಮಾಡಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.ವಿಮಾನದಲ್ಲಿ ಬಂದಿರುವ ಸಹ ಪ್ರಯಾಣಿಕರಾಗಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರನ್ನು ಸಹ ಪತ್ತೆಹಚ್ಚಬೇಕಾಗುತ್ತದೆ. ಪ್ರಯಾಣಿಕರ ವಿವರಗಳನ್ನು ನೀಡಬೇಕೆಂದು ನಾಗರಿಕ ವಿಮಾನಯಾನ ಇಲಾಖೆಗೂ ಮನವಿ ಮಾಡಿದ್ದೇವೆ ಎಂದರು.
ಸದ್ಯಕ್ಕೆ ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ. ಎಲ್ಲವೂ ನಿಯಂತ್ರಣದಲ್ಲಿದ್ದು, ಸೋಂಕು ಹರಡದಂತೆ ಏನು ಕ್ರಮ ಕೈಗೊಳ್ಳಬೇಕೋ ಎಲ್ಲವನ್ನೂ ತೆಗೆದುಕೊಂಡಿದ್ದೇವೆ. ಇಂದು ಅಧಿಕಾರಿಗಳು, ತಜ್ಞರು ಮತ್ತು ಕೋವಿಡ್ ಸಲಹಾ ಸಮಿತಿ ಜತೆ ಮತ್ತೊಮ್ಮೆ ಸಭೆ ನಡೆಸಲಿದ್ದೇವೆ ಎಂದು ಹೇಳಿದರು.



