ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಕಾರ್ಗೊ, ಪಾರ್ಸೆಲ್ ಮತ್ತು ಹಗುರ ಪಾರ್ಸೆಲ್ಗಳ ಸೇವೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಈ ವ್ಯವಸ್ಥೆ ಜಾರಿ ಮಾಡುವುದರಿಂದ ಸಾರಿಗೆ ಸಂಸ್ಥೆಗೆ ವಾರ್ಷಿಕ 80 ಕೋಟಿಯಿಂದ 100 ಕೋಟಿ ಆದಾಯ ಸಿಗಲಿದೆ. ಮೊದಲ ಹಂತದಲ್ಲಿ ರಾಜ್ಯದೊಳಗೆ 88 ಬಸ್ ನಿಲ್ದಾಣಗಳಲ್ಲಿ ಮತ್ತು ಅಂತರರಾಜ್ಯಗಳ 21 ಬಸ್ ನಿಲ್ದಾಣಗಳು ಸೇರಿ ಒಟ್ಟು 109 ಬಸ್ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಎರಡನೇ ಹಂತದಲ್ಲಿ ಉಳಿದ ಬಸ್ ನಿಲ್ದಾಣಗಳಲ್ಲೂ ಈ ಯೋಜನೆ ಜಾರಿ ಬರಲಿದೆ ಎಂದು ಹೇಳಿದರು.
ಈಗ ಲಗೇಜ್ ಸಾಗಣೆಯಿಂದ ಮೂರು ಸಾರಿಗೆ ನಿಗಮಗಳು ಪ್ರತಿ ದಿನ 8.50 ಲಕ್ಷ ಆದಾಯಗಳಿಸುತ್ತಿದೆ. ಹೊಸ ವ್ಯವಸ್ಥೆ ಜಾರಿ ಆದ ಬಳಿಕ ಲಗೇಜ್ ಆದಾಯ ಎರಡು ಪಟ್ಟು ಹೆಚ್ಚಾಗಲಿದೆ ಎಂದರು.
ಈ ಯೋಜನೆಯ ಜಾರಿಗೆ ‘ಮೆ.ಸ್ಟ್ರಾಟಜಿಕ್ ಔಟ್ ಸೋರ್ಸಿಂಗ್ ಪ್ರೈವೇಟ್ ಲಿಮಿಟೆಡ್’ ಅನ್ನು ಟೆಂಡರ್ ಮೂಲಕ ಐದು ವರ್ಷಗಳ ಅವಧಿಗೆ ನಿರ್ವಹಣಾ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ಈ ಕಂಪನಿಯವರೇ ಕೌಂಟರ್ ನಿರ್ವಹಿಸಲು ಮಾನವ ಶಕ್ತಿ ನಿಯೋಜನೆ, ಲಗೇಜ್ ಸ್ವೀಕರಿಸುವುದು, ಬಸ್ಸಿಗೆ ಲೋಡಿಂಗ್- ಅನ್ ಲೋಡಿಂಗ್ ಮಾಡುವುದು, ತಲುಪಿದ ಬಸ್ ನಿಲ್ದಾಣದಲ್ಲಿ ಗ್ರಾಹಕರಿಗೆ ಲಗೇಜ್ ವಿಲೇವಾರಿ ಇತ್ಯಾದಿ ಕೆಲಸಗಳನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಈ ವ್ಯವಸ್ಥೆಗೆ ಅಗತ್ಯವಿರುವ ತಂತ್ರಾಂಶವನ್ನು ಸಾಫ್ಟ್ವೇರ್ ಪ್ರೊವೈಡರ್ ಅಭಿವೃದ್ಧಿಪಡಿಸಲಿದೆ. ಗ್ರಾಹಕರು ಪಾರ್ಸೆಲ್ ಬುಕ್ಕಿಂಗ್ ಸಂಬಂಧ ವಿಚಾರಣೆ ನಡೆಸಲು ಅಥವಾ ಅಹವಾಲಿನ ಬಗ್ಗೆ ದೂರು ನೀಡಲು ದಿನದ 24 ಗಂಟೆಗಳೂ ಕಾರ್ಯ ನಿರ್ವಹಿಸುವ ಕಾಲ್ಸೆಂಟರ್ ಸ್ಥಾಪಿಸಲಾಗಿದೆ ಎಂದು ಹೇಳಿದರು.ಗ್ರಾಹಕರ ವಸ್ತುಗಳಿಗೆ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದುತಿಳಿಸಿದರು.



