ಸಾಣೇಹಹಳ್ಳಿ: ಇಂದು ಸಿಎಂ ಯಡಿಯೂರಪ್ಪ ಅವರು ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಮಾರಂಭದ ಜಾಹೀರಾತಿನಲ್ಲಿ ಸನಾತನ ಪದ ಬಳಕೆಗೆ ತರಳಬಾಳು ಶಾಖಾ ಮಠದ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.
ಶ್ರೀಗಳ ಹೇಳಿಕೆ ಈ ರೀತಿ ಇದೆ: ಇಂದಿನ ದಿನಪತ್ರಿಕೆಗಳ ಮುಖಪುಟದಲ್ಲಿ ನೂತನ ಅನುಭವ ಮಂಟಪ ನಿರ್ಮಾಣದ ಭೂಮಿ ಪೂಜೆ ಮುಖ್ಯಮಂತ್ರಿಗಳಿಂದ ನಡೆಯುವ ಜಾಹಿರಾತನ್ನು ನೋಡಿ ಹಾಲು ಕುಡಿದಷ್ಟೇ ಸಂತೋಷವಾಯಿತು. ಆದರೆ, ಆರಂಭದಲ್ಲೇ ಎದ್ದುಕಾಣುವ “ಸನಾತನ” ಎನ್ನುವ ಪದಬಳಕೆ ಗಮನಿಸಿದಾಗ ಮೊಸರಲ್ಲಿ ಕಲ್ಲು ಸಿಕ್ಕಂತಾಯಿತು. ಸನಾತನತೆ ಮತ್ತು ಪ್ರಗತಿಪರ ಶಬ್ದಗಳು ಪರಸ್ಪರ ವಿರೋಧಿಗಳು. ಶರಣರದು ನಡೆ, ನುಡಿ ಒಂದಾದ ಪ್ರಾಯೋಗಿಕ ಮತ್ತು ವೈಚಾರಿಕ ಧರ್ಮ. ಅವರ. ಹೋರಾಟ ಸನಾತನ ಗೊಡ್ಡು ಪರಂಪರೆಗಳ ವಿರುದ್ಧ. ವೇದ, ಶಾಸ್ತ್ರ, ಪುರಾಣ, ಆಗಮಗಳ ವಿರುದ್ಧ ಧ್ವನಿ ಎತ್ತಿದ್ದನ್ನು ವಚನಗಳಲ್ಲಿ ಮನಗಾಣಬಹುದು. ಹೀಗಿರುವಾಗ ಅದಾವ ಮಹಾನುಭಾವರು ಜಾಹಿರಾತಿನಲ್ಲಿ “ಸನಾತನ” ಪದ ಬಳಸಿದರೋ! ಅವರ ಉದ್ದೇಶ ಏನೆಂಬುದನ್ನು ಬಿಚ್ಚಿ ಹೇಳಬೇಕಿಲ್ಲ.
ಈ ಸನಾತನ ಪರಂಪರೆಯವರೇ ಕಲ್ಯಾಣದಲ್ಲಿ ರಕ್ತಕ್ರಾಂತಿಯ ಬೀಜ ಬಿತ್ತಿ ವಚನ ಸಾಹಿತ್ಯವನ್ನು ಭಸ್ಮ ಮಾಡಲು ಮುಂದಾಗಿದ್ದು. ಅದರ ಪಳೆಯುಳಿಕೆಗಳು ಇಂದಿಗೂ ಜೀವಂತವಾಗಿವೆ. ಹೊಸದಾಗಿ ಕಟ್ಟುವ ಅನುಭವ ಮಂಟಪ ಅಂತಹ ಸನಾತನಿಗಳ ಆಡಳಿತಕ್ಕೆ ಸಿಕ್ಕರೆ ಬಸವಾದಿ ಶಿವಶರಣರ ಸಮಾಜೋಧಾರ್ಮಿಕ ಚಿಂತನೆಯನ್ನು ಹಿಸುಕಿ ಮತ್ತೆ ಅದೇ ಪುರೋಹಿತ ಪರಂಪರೆಯನ್ನು ಬೆಳಸಿದಂತೆ ಆಗುವುದು. ಆದುದರಿಂದ ಇಂತಹ ದೋಷಗಳು ಮುಂದೆ ಆಗದಂತೆ ಬಸವಾನುಯಾಯಿಗಳು ಜಾಗರೂಕರಾಗಿರಬೇಕಾಗಿದೆ. ಸರ್ಕಾರ ಸಹ ಶರಣರ ಆಚಾರ ವಿಚಾರಗಳಿಗೆ ಚ್ಯುತಿ ಬಾರದಂತೆ ಎಚ್ಚರವಹಿಸಬೇಕೆಂದು ಈ ಮೂಲಕ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತೇವೆ.– ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು



