ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ಗುತ್ತಿಗೆದಾರರನ್ನು ಪ್ರಶ್ನಿಸಿದ ಶಾಸಕ ತಿಪ್ಪಾರೆಡ್ಡಿಗೆ ಬೌನ್ಸ್ ಮೂಲಕ ಬೆದರಿಸಲು ಯತ್ನಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹಾಗು ಅರಣ್ಯ ಇಲಾಖೆ ಅನುಮತಿಯನ್ನೇ ಪಡೆಯದೆ ಗುತ್ತಿಗೆದಾರ ಪ್ರಭಾವಿ ರಾಜಕಾರಣಿಗಳು, ಸಚಿವರಿಂದ ಒತ್ತಡ ಹಾಕಿ ಮಣ್ಣು ಸಾಗಿಸುತ್ತಿದ್ದರು. ರಸ್ತೆ ಹಾಳಾಗುತ್ತಿರು ಬಗ್ಗೆ ಚಿತ್ರದುರ್ಗ ತಾಲೂಕಿನ ಇಂಗಳದಾಲಕು ಲಂಬಾಣಿಹಟ್ಟಿ ಗ್ರಾಮಸ್ಥರು ಶಾಸಕರಿಗೆ ದೂರು ನೀಡಿದ್ದರು. ಹೀಗಾಗಿ ಸ್ಥಳ ಪರಿಶೀಲನೆಗೆ ತೆರಳಿದ್ದ ಚಿತ್ರದುರ್ಗ ಶಾಸಕ ಜಿಹೆಚ್ ತಿಪ್ಪಾರೆಡ್ಡಿ, ಗುತ್ತಿಗೆದಾರನ್ನು ಸ್ಥಳಕ್ಕೆ ಕರೆಸಿದರು.
ಈ ವೇಳೆ ಐವರು ಬೌನ್ಸರ್ ಗಳನ್ನು ಕರೆದುಕೊಂಡು ಬಂದ ಗುತ್ತಿಗೆದಾರ ಚಂದ್ರಶೇಖರ್ ಎಂಬಾತ ಉತ್ತರ ಕರ್ನಾಟಕ ಭಾಗದ ಪ್ರಭಾವಿ ರಾಜಕಾರಣಿಗಳ ಮಕ್ಕಳು ಹಾಗೂ ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ಅವರಿಂದಲೂ ಒತ್ತಡ ಹಾಕುವ ಪ್ರಯತ್ನ ಮಾಡಿದರು.
ಒತ್ತಡಕ್ಕೆ ಮಣಿಯದ ಶಾಸಕ ತಿಪ್ಪಾರೆಡ್ಡಿ, ಐದಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ರಸ್ತೆ ಹಾಳಾಗಿದೆ, ಅನುಮತಿ ಪಡೆಯದೇ ಮಣ್ಣು ಸಾಗಾಟ ನಡೆಯುತ್ತಿದೆ, ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರಬೇಕೆ ಎಂದು ಶಾಸಕರು ಕಿಡಿಕಾರಿದರು. ಈ ವೇಳೆ ಬೌನ್ಸರ್ ಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ತಿಪ್ಪಾರೆಡ್ಡಿ, ಪಿಎನ್ ಸಿ ಕಂಪನಿಯ ಉಪಗುತ್ತಿಗೆದಾರ ಚಂದ್ರಶೇಖರ್ ಹಾಗೂ ಜೊತೆಯಲ್ಲಿ ಬೆದರಿಕೆ ಹಾಕಲು ಕರೆತಂದಿದ್ದ ಐವರು ಬೌನ್ಸರ್ ಗಳ ವಿರುದ್ದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



