ಚಿತ್ರದುರ್ಗ: ಈಗಿನ ಕಾಲದಲ್ಲಿ ಒಂದು ಮದುವೆ ಮಾಡುವುದು ಎಷ್ಟೆಲ್ಲ ಕಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ..! ವಧು-ವರ ಒಪ್ಪಿಗೆ ಮೆರೆಗೆ ಮದುವೆ ನಡೆಯುವುದನ್ನು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ, ಚಿತ್ರದುರ್ಗದಲ್ಲೊಂದು ವಿಚಿತ್ರ ಪ್ರಸಂಗ ನಡೆದಿದೆ. ಮದುವೆಗೆ ಸಕಲ ಸಿದ್ಧತೆ, ಎಲ್ಲಾ ಶಾಸ್ತ್ರ ನಡೆದು, ಇನ್ನೇನು ತಾಳಿ ಕಟ್ಟುವಾಗ ಯುವತಿ ನನಗೆ ಮದುವೆ ಇಷ್ಟವಿಲ್ಲವೆಂದು ಕೈ ಅಡ್ಡ ಹಿಡಿದು ಎಲ್ಲರನ್ನು ಒಂದು ಕ್ಷಣ ಅಚ್ಚರಿ ಮೂಡಿಸಿದ್ದಾಳೆ…
ಈ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ನಡೆದಿದೆ. ಮೊದಲೇ ನಿಶ್ಚಯಿಸಲಾಗಿದ್ದ ಮದುವೆಯಲ್ಲಿ ವರ ತಾಳಿ ಕಟ್ಟಲು ಹೋದಾಗ ಕೈ ಅಡ್ಡ ಹಿಡಿದ ವಧು ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳುವ ಮೂಲಕ ವಿವಾಹವನ್ನು ಮುರಿದಿದ್ದಾಳೆ. ಆರು ತಿಂಗಳ ಹಿಂದೆಯೇ ಓದುವ ಕಾರಣವೊಡ್ಡಿ ಮದುವೆ ಆಗಲ್ಲ ಎಂದು ಹಠ ಹಿಡಿದಿದ್ದಳು. ಆದ್ರೆ, ಕುಟುಂಬಸ್ಥರು ಮನವೊಲಿಸಿ ಒಪ್ಪಿಸಿದ್ದರು. ಇದೀಗ ವಧು ಮದುವೆ ಮಂಟಪದವರೆಗೂ ಬಂದು ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ವಧು ಮದುವೆ ನಿರಾಕರಿಸಿದ್ದಾಳೆ. ಈ ಮದುವೆ 6 ತಿಂಗಳ ಹಿಂದೆ ನಿಶ್ವಿತಾರ್ಥವಾಗಿತ್ತು. ಮದುವೆ ಬಗ್ಗೆ ಹುಡುಗಿ ಮನೆಯವರು ಕೇಳಿದ ನಂತರವೇ ಮದುವೆ ನಿಶ್ಚಯವಾಗಿತ್ತು.
ಓದಿಸುತ್ತೇನೆ ಅಂದ್ರೆ ಮಾತ್ರ ಮದುವೆ ಆಗುತ್ತೇನೆ ಎಂದು ಹುಡುಗಿ ಹೇಳಿದ್ದಳು. ಅದರಂತೆ ವರ 50 ಸಾವಿರ ಕೊಟ್ಟು ಚಿಕ್ಕನಾಯಕನಹಳ್ಳಿಯ ಕಾಲೇಜ್ಗೆ ಬಿಸಿಎ ಸೇರಿಸಿದ್ದ. ಆದ್ರೆ, ಕೆಲ ತಿಂಗಳ ಹಿಂದೆ ಹುಡುಗಿ ಮದುವೆ ಆಗಲ್ಲ ಅಂತ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಮಾತುಕತೆ ಮಾಡಲು ಊರಿನವರನ್ನು ಕಳಿಸಿದ್ದೆವು. ಆಗ ಹುಡುಗಿ ಮನೆಯವರು, ತಂದೆ-ತಾಯಿ ಹಾಗೇನಿಲ್ಲ. ನೀವು ಮದುವೆ ಕ್ಯಾನ್ಸಲ್ ಮಾಡಿದ್ರೆ ಸೂಸೈಡ್ ಮಾಡಿಕೊಳ್ಳುತ್ತೇವೆಂದು ಹೆದರಿಸಿದ್ದರು. ನಮ್ಮ ಹುಡುಗಿಗೆ ನಾವು ತಿಳಿ ಹೇಳಿದ್ದೇವೆ. ಮದುವೆ ಆಗುವುದಕ್ಕೆ ಒಪ್ಪಿದ್ದಾಳೆ ಎಂದು ವಧು ತಂದೆ-ತಾಯಿ ಹೇಳಿದ್ದರು ಎನ್ನುತ್ತಾರೆ ವರ ಕಡೆಯವರು ದೂರಿದ್ದಾರೆ.
ಡಿಸೆಂಬರ್ 6ರಂದು ಆರತಕ್ಷತೆ, ಡಿಸೆಂಬರ್ 7ರಂದು ಮದುವೆ ಕಾರ್ಯಕ್ರಮವಿತ್ತು. ಆದ್ರೆ, ಹುಡುಗಿ ಡಿಸೆಂಬರ್ 6ರಂದು 112ಮೂಲಕ ಪೊಲೀಸರಿಗೆ ಕರೆ ಮಾಡಿದ್ದಾಳೆ. ನನಗೆ ಮದುವೆ ಇಷ್ಟ ಇಲ್ಲ ಬಲವಂತದ ಮದುವೆ ನಡೆಯುತ್ತಿದೆ ಎಂದು ಹೇಳಿದ್ದಾಳೆ . ನಾನು ಮದುವೆ ಆಗಲು ಇಷ್ಟ ಇಲ್ಲ ಅಂತ ಮೊದಲಿಗೆ ಪೊಲೀಸರಿಗೆ ಹೇಳಿದ್ದಳು. ಹುಡುಗನಿಗೆ ವಿಷಯ ತಿಳಿದಿದ್ದು ಹುಡುಗಿಗೆ ಕರೆ ಮಾಡಿದ್ದ. ಆಗ ಹುಡುಗಿ ನಾನು ಪೊಲೀಸರಿಗೆ ಕಾಲ್ ಮಾಡಿಲ್ಲ. ನಮಗೆ ಆಗದವರು ಕಾಲ್ ಮಾಡಿದ್ದಾರೆ ಎಂದಿದ್ದಳು. ನಂತರ ಪೊಲೀಸರು ಚೌಟರಿಯಿಂದ ಹೋಗಿದ್ದರು.
ನಂತರ ಆರತಕ್ಷತೆ, ಮದುವೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಹುಡುಗಿ ಕುಟುಂಬದವರೇ ಮಂಟಪಕ್ಕೆ ಬಂದಿದ್ದಾರೆ. ತಾಳಿ ಕಟ್ಟುವ ಕಾರ್ಯದವರೆಗೆ ಹುಡುಗಿ ಏನೂ ಹೇಳಿಲ್ಲ. ತಾಳಿ ಕಟ್ಟುವ ವೇಳೆ ನಾನು ಮದುವೆ ಆಗಲ್ಲ ಅಂತ ಹಠ ಹಿಡಿದ್ದಾಳೆ. ವಧು ತಾಳಿ ಬೇಡವೆಂದ ಕಾರಣಕ್ಕೆ ವರನೂ ತಾಳಿ ಕಟ್ಟಲಿಲ್ಲ. ಯುವತಿಯ ತಂದೆ ಮಗಳು ಏನು ಹೇಳುತ್ತಾಳೆ ಹಾಗೇ ಆಗಲಿ ಅಂದರು. ಮದುವೆಗೆ ಖರ್ಚು ಮಾಡಿದ್ದ ಹಣದಲ್ಲಿ 3 ಲಕ್ಷ ವಾಪಸ್ ಕೊಡಲು ಪೊಲೀಸರ ಸಮ್ಮುಖದಲ್ಲಿ ಒಪ್ಪಿಸಿ ಬಿಡುಗಡೆ ಮಾಡಿಕೊಂಡಿದ್ದಾರೆ.