ಬೆಂಗಳೂರು: ಕೋವಿಡ್ ಸಂಕಷ್ಟ ಹಾಗೂ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಸುವ ನಿರೀಕ್ಷೆ ಇದ್ದವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರಾಸೆ ಮೂಡಿಸಿದ್ದಾರೆ. ಈ ವರ್ಷ ಯಾವುದೇ ಹೊಸ ತೆರಿಗೆ ವಿಧಿಸುವುದಿಲ್ಲ, ತೆರಿಗೆ ಕಡಿತ ಮಾಡದೆ ಯಥಾ ಸ್ಥತಿ ಮುಂದುವರೆಯಲಿದೆ ಎಂದು ಘೋಷಿಸಿದ್ದಾರೆ.
ಇಂದು ಮಂಡನೆಯಾದ ಜಜೆಟ್ ನಲ್ಲಿ ಉಲ್ಲೇಖಿಸಿದ ಅವರು, ಕೋವಿಡ್ನಿಂದಾಗಿ ಜನ ಈಗಾಗಲೇ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಮತ್ತಷ್ಟು ತೆರಿಗೆ ಹೊರೆ ವಿಧಿಸುವುದಿಲ್ಲ. ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ಮಾರಾಟ ತೆರಿಗೆಯು ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲೇ ಕಡಿಮೆ ಇದೆ ಎಂದರು.
ಇದನ್ನು ಹೊರತುಪಡಿಸಿ 2021-22ನೇ ಸಾಲಿನಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಯಾವುದೇ ತೆರಿಗೆ ವಿಧಿಸಲಾಗಿಲ್ಲ. ಹೀಗಾಗಿ ಪೆಟ್ರೋಲ್-ಡೀಸೆಲ್ ಮೇಲಿನ ಮಾರಾಟ ತೆರಿಗೆ ಕಡಿತ ಮಾಡುವುದಿಲ್ಲ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯು ಜನರ ಮೇಲೆ ಇನ್ನಷ್ಟು ಹೊರೆಯಾಗಬಾರದು ಎಂದು ತೆರಿಗೆ ಹೆಚ್ಚಿಸದಿರಲು ನಿರ್ಧರಿಸಲಾಗಿದೆ ಎಂದರು.



