ದಾವಣಗೆರೆ: ಭದ್ರಾ ಜಲಾಶಯ ವ್ಯಾಪ್ತಿಯ ಚಿಕ್ಕಮಗಳೂರು, ಶಿವಮೊಗ್ಗ ತೀರ್ಥಹಳ್ಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ( ಜು.7) 8,689 ಕ್ಯೂಸೆಕ್ ಒಳ ಹರಿವಿದ್ದು, ನಿನ್ನೆಗೆ ಹೋಲಿಸಿದರೆ ಇಂದು 1 ಸಾವಿರ ಕ್ಯೂಸೆಕ್ ನಷ್ಟು ಏರಿಕೆಯಾಗಿದೆ.
ಏಕಾಏಕಿ ಒಳ ಹರಿವು ಹೆಚ್ಚಳದಿಂದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ತುಸು ಸಂತಸ ಮನೆ ಮಾಡಿದೆ. ಅದರಲ್ಲೂ ಭದ್ರಾವತಿ, ಹೊನ್ನಾಳಿ, ಹರಿಹರ, ದಾವಣಗೆರೆ ಭಾಗದ ಭತ್ತದ ಬೆಳೆಗಾರಲ್ಲಿ ಕೊನೆ ಗಳಿಗೆಯಲ್ಲಿ ಭತ್ತ ನಾಟಿ ಮಾಡುವ ಭರವಸೆ ಹುಟ್ಟಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ದಾವಣಗೆರೆ ಜಿಲ್ಲೆಯಲ್ಲಿ 65,847 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈಗ ಭದ್ರಾ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗಿರುವುದರಿಂದ ಭತ್ತದ ಸಸಿ ಮಡಿ ಮಾಡುವ ಕಾರ್ಯ ಶುರುವಾಗಿದೆ. ಇದೇ ರೀತಿ ಮಳೆಯಾದರೆ ಡ್ಯಾಂ ಭರ್ತಿಯಾಗಿ ಬೆಳೆಗೆ ನೀರು ಸಿಗುವ ಸಂಭವವಿದೆ.
ಕಳೆದ ವರ್ಷದ ತೀವ್ರ ಬರಗಾಲದಿಂದ ಅತಿ ಕಡಿಮೆ ನೀರು ಸಂಗ್ರಹವಾಗಿತ್ತು. ಈ ಬಾರಿ ಭದ್ರಾ ಜಲಾಯಶ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮ ಆರಂಭ ಪಡೆದಿತ್ತದರೂ, ನಂತರದ 20 ದಿನ ಸಂಪೂರ್ಣ ತಗ್ಗಿತ್ತು. ಈಗ ಎರಡ್ಮೂರು ದಿನದಿಂದ ಉತ್ತಮ ಮಳೆಯಾಗುತ್ತಿದೆ.ಮುಂದೆ ಇದೇ ರೀತಿ ಮಳೆಯಾಗಿ ಬೇಗ ಡ್ಯಾಂ ತುಂಬಲಿ ಎಂಬುದು ಭದ್ರಾ ಅಚ್ಚುಕಟ್ಟು ಭಾಗದ ರೈತರ ಅಶಯವಾಗಿದೆ.
ತರಿಕೇರಿ ಮತ್ತು ಭದ್ರಾವತಿ ಗಡಿ ಭಾಗದಲ್ಲಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿಯಾಗಿದೆ. ಇಂದಿನ (ಜು.7) ನೀರಿನ ಮಟ್ಟ 131.10 ಅಡಿಯಷ್ಟಿದೆ. ಒಳ ಹರಿವು 8,689 ಕ್ಯೂಸೆಕ್ ನಷ್ಟಿದೆ.
- ಭದ್ರಾ ಜಲಾಶಯ ನೀರಿನ ವಿವರ
- ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
- ಗರಿಷ್ಠ : 186 ಅಡಿ
- ಇಂದಿನ ಮಟ್ಟ: 131.10 ಅಡಿ
- ಒಳ ಹರಿವು : 8,689 ಕ್ಯೂಸೆಕ್ (ಜು.6ರಂದು: 7,736 ಕ್ಯೂಸೆಕ್)
- ಹೊರ ಹರಿವು : 553 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 138.11ಅಡಿ



