ದಾವಣಗೆರೆ:ಬೆಂಗಳೂರಿನ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತದಿಂದ ತಾಯಿ- ಮಗು ಸಾವನ್ನಪ್ಪಿದ್ದು, ಮೃತರ ಅಂತ್ಯಕ್ರಿಯೆ ತವರು ಮನೆ ದಾವಣಗೆರೆಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ನಿನ್ನೆ (ಜ.10) ತಡ ರಾತ್ರಿ ಬಸವೇಶ್ವರ ನಗರದಲ್ಲಿರುವ ನಿವಾಸಕ್ಕೆ ಮೃತ ದೇಹವನ್ನು ತರಲಾಗಿತ್ತು. ಇವತ್ತು (ಜ.11) ಬೆಳಗ್ಗೆ ಕ್ಷೇತ್ರೀಯ ಸಮಾಜದ ನಿಯಮದಂತೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಮಂಗಳವಾರ ಬೆಳಗ್ಗೆ ಬೆಂಗಳೂರಿನ ಎಚ್ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಒಂದು ಮರದ ಮೇಲೆ ಉರುಳಿ,ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಮೇಲೆ ಬಿದ್ದಿತ್ತು. ಇದರಿಂದ ಬೈಕ್ನಲ್ಲಿ ಸಾಗುತ್ತಿದ್ದ ಲೋಹಿತ್ ಅವರ ಪತ್ನಿ ತೇಜಸ್ವಿನಿ ಹಾಗೂ ಪುಟ್ಟ ಮಗು ವಿಹಾನ್ ಮೃತಪಟ್ಟಿದ್ದರು. ಲೋಹಿತ್ ಮತ್ತು ಇನ್ನೊಂದು ಮಗು ಪವಾಡ ಸದೃಶವಾಗಿ ಬದುಕುಳಿದಿತ್ತು. ಲೋಹಿತ್ ಅವರು ಮೂಲತಃ ಗದಗದವರಾದರೆ, ತೇಜಸ್ವಿನಿ ದಾವಣಗೆರೆಯವರು.
ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆದ ಬಳಿಕ ತೇಜಸ್ವಿನಿ ಹಾಗೂ ಮಗುವಿನ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿತ್ತು. ರಾತ್ರಿಯೇ ದಾವಣಗೆರೆಯ ತೇಜಸ್ವಿನಿ ಅವರ ತಾಯಿ ಮನೆಗೆ ಕರೆದೊಯ್ಯಲಾಗಿತ್ತು. ಬುಧವಾರ ದಾವಣಗೆರೆಯ ಬಸವೇಶ್ವರ ನಗರದಲ್ಲಿರುವ ನಿವಾಸದಲ್ಲಿ ಭಾವಸಾರ ಕ್ಷೇತ್ರೀಯ ಸಮಾಜದ ನಿಯಮದಂತೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಮೊದಲು ಗ್ಲಾಸ್ ಹೌಸ್ ಬಳಿಯ ರುದ್ರಭೂಮಿಯಲ್ಲಿ ಮಗು ವಿಹಾನ್ನ ಅಂತ್ಯಸಂಸ್ಕಾರ ನೆರವೇರಿಸಿ ಬಳಿಕ ಪಿಬಿ ರಸ್ತೆಯಲ್ಲಿರುವ ವೈಕುಂಠ ದಾಮದಲ್ಲಿ ತಾಯಿ ತೇಜಸ್ವಿನಿ ಮೃತದೇಹ ದಹನ ಮಾಡಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಮೋಟರೋಲಾದಲ್ಲಿ ಇಂಜಿನಿಯರ್ ಆಗಿರುವ ತೇಜಸ್ವಿನಿ ಅವರನ್ನು ಪತಿ ಲೋಹಿತ್ ಎಂದಿನಂತೆ ಕಚೇರಿಗೆ ಬಿಟ್ಟು ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್ ಬಿಡಲು ತೆರಳುತ್ತಿದ್ದರು. ಆದರೆ, ಮೆಟ್ರೋ ಪಿಲ್ಲರ್ಗಳು ಏಕಾಏಕಿ ಮರದ ಮೇಲೆ ಉರುಳಿ, ಆ ಮರವು ಬೈಕ್ನಲ್ಲಿ ಬರುತ್ತಿದ್ದ ತೇಜಸ್ವಿನಿಯ ತಲೆ ಮೇಲೆ ಹಾಗೂ ಎರಡೂವರೆ ವರ್ಷದ ವಿಹಾನ್ನ ಬಲಭಾಗದ ಮೇಲೆ ಬಿದ್ದಿತ್ತು. ತೀವ್ರ ರಕ್ತಸ್ರಾವದಿಂದಾಗಿ ಅವರಿಬ್ಬರು ಚಿಕಿತ್ಸೆ ಫಲಿಸದೇ ಮಂಗಳವಾರ ಮೃತಪಟ್ಟಿದ್ದರು.



