ಕಾರವಾರ: ಮಠಾಧೀಶರಿಗೆ ರಾಜಕೀಯ ಯಾಕೆ ಬೇಕು? ಆಸಕ್ತಿಯಿದ್ದರೆ ನಮ್ಮ ಜೊತೆಗೆ ವಿಧಾನಸೌಧಕ್ಕೆ ಬರಲಿ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಮುದಾಯಗಳ ಅಭಿವೃದ್ಧಿಗೆ ನಾವು ರಾಜಕಾರಣಿಗಳಿದ್ದೇವೆ. ಸ್ವಾಮೀಜಿಗಳು ಅವರ ಮಠದಲ್ಲಿದ್ದುಕೊಂಡು ಸಮಾಜಸ ಶಾಂತಿ ನೋಡಿಕೊಳ್ಳಬೇಕು. ಸರ್ಕಾರವು ಜಾತಿಗೊಂದು ನಿಗಮ ರಚಿಸಲು ಮುಂದಾಗಿರುವುದೇ ತಪ್ಪು. ಈ ವಿಚಾರದಲ್ಲಿ ಸ್ವಾಮೀಜಿಗಳು ಮಧ್ಯಪ್ರವೇಶಿಸುವುದೂ ಸರಿಯಲ್ಲ ಎಂದರು.
ಶಿಕ್ಷಣದ ವಿಚಾರದಲ್ಲಿ ನನ್ನ ಅನುಭವವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ನಾನು ಸಿದ್ಧನಿದ್ದೇನೆ. ಆದರೆ, ನನ್ನ ಮಾತನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸಲಿಲ್ಲ. ಆನ್ಲೈನ್ ತರಗತಿಗಳ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಹೇಳಿಕೆಗಳು ಗೊಂದಲ ಮೂಡಿಸುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದು, ಶುಲ್ಕದ ಮೊತ್ತದಿಂದಲೇ ನಡೆಯುವ ಹಲವು ಶಾಲೆಗಳಿವೆ ಎಂದು ತಿಳಿಸಿದರು.



