ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಾದ್ಯಂತ ಭತ್ತದ ಬೆಳೆಯು ತೆನೆ ಒಡೆಯುವ ಹಂತದವರೆಗೆ ಇದ್ದು ಅಲ್ಲಲ್ಲಿ ಬೆಂಕಿರೋಗದ ಬಾಧೆ ಕಾಣಿಸಿಕೊಂಡಿದೆ. ಮೋಡ ಮುಸುಕಿದ, ಹೆಚ್ಚು ಆದ್ರತೆಯಿಂದ ಕೂಡಿದ ವಾತಾವರಣದಲ್ಲಿ ಬಾಧೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ.
ಇದೊಂದು ಶಿಲೀಂಧ್ರದಿಂದ ಬರುವ ರೋಗವಾಗಿದ್ದು, ಬೆಳೆಯ ಎಲ್ಲಾ ಹಂತಗಳಲ್ಲು ಕಾಣಿಸಿಕೊಂಡು ಇಳುವರಿ ಮೇಲೆ ಪರಿಣಾಮ ಬೀರುತ್ತದೆ.
ರೋಗದ ಲಕ್ಷಣಗಳು : ಗರಿಗಳ ಮೇಲೆ ವಜ್ರಾಕಾರದ ಕಂದು ಬಣ್ಣದ ಚುಕ್ಕೆಗಳುಂಟಾಗಿ ಆ ಚುಕ್ಕೆಗಳ ಮಧ್ಯಭಾಗವು ಬೂದು ಬಣ್ಣ ಹೊಂದಿರುತ್ತದೆ. ಚುಕ್ಕೆಗಳು ದೊಡ್ಡದಾದಂತೆ ಒಂದಕ್ಕೊಂದು ಸೇರಿಕೊಂಡು ಎಲೆಗಳು ಸುಟ್ಟಂತೆ ಭಾಸವಗುತ್ತದೆ. ತೆನೆಯ ಹಂತದಲ್ಲಿ, ತೆನೆಯ ಕುತ್ತಿಗೆಯ ಭಾಗದಲ್ಲಿ ಕಂದು ಮಚ್ಚೆ ಕಂಡುಬಂದು ನಂತರ ತೆನೆ ಒಣಗಿ ಕಾಳು ಜೊಳ್ಳಾಗುತ್ತವೆ.
ನಿರ್ವಹಣೆ: ಗದ್ದೆಯಲ್ಲಿ ಹಾಗೂ ಗದ್ದೆ ಬದುಗಳಲ್ಲಿ ಕಳೆ ತೆಗೆದು ಜಮೀನಿನಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ತಕ್ಷಣ ಸಾರಜನಕಯುಕ್ತ ರಾಸಾಯನಿಕ ಗೊಬ್ಬರ ಕೊಡುವುದನ್ನು ನಿಲ್ಲಿಸಿ. ಆದಷ್ಟು 2 ಹಂತಗಳಲ್ಲಿ ಮೇಲುಗೊಬ್ಬರವಾಗಿ ಕೊಡಿ. ಸಾವಯವ ಹಾಗೂ ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ರೈತರು 10 ಲೀಟರ್ ನೀರಿಗೆ 1 ಲೀ. ಹುಳಿಮಜ್ಜಿಗೆ ಬೆರೆಸಿ ಸಿಂಪಡಿಸಿ. ರಾಸಾಯನಿಕ ಸಿಂಪರಣೆಗಾಗಿ 4 ಗ್ರಾಂ. ಕಾರ್ಬನ್ ಡೈಜಿಂ 50 ಡಬ್ಲ್ಯು.ಪಿ. / 0.6 ಗ್ರಾಂ ಟ್ರ್ಯೈಸೈಕ್ಲೊಜೋಲ್ 75 ಡಬ್ಲ್ಯು.ಪಿ. / 1 ಮಿ.ಲೀ. ಎಡಿಫಿನ್ಫಾಸ್ 50 ಇ.ಸಿ. / 1 ಮಿ.ಲೀ. ಕಿಟಾಜಿನ್ 48 ಇ.ಸಿ. ಇವುಗಳಲ್ಲಿ ಯಾವುದಾರೊಂದನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕೆಂದು ಕೃಷಿ ಜಂಟಿ ನಿರ್ದೇಶಕರಾದ ಶ್ರೀನಿವಾಸ ಚಿಂತಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



