ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಬೆಳವಣಿಗೆ ಹಂತದಿಂದ ತೆಂಡೆ ಒಡೆಯುವ ಹಂತದಲ್ಲಿದ್ದು, ಕೆಲ ಪ್ರದೇಶಗಳಲ್ಲಿ ಕವಚ ಕೊಳೆ ರೋಗದ ಬಾಧೆ ಕಾಣಿಸಿಕೊಂಡಿದೆ. ಈ ರೋಗವು ರೈಜೊಕ್ಟೋನಿಯ ಸೋಲನಿ ಎಂಬ ಶಿಲೀಂದ್ರದಿಂದ ಹರಡಲಿದ್ದು, ಮೋಡ ಮುಸುಕಿದ ವಾತಾವರಣದಲ್ಲಿ ಬಾಧೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದು.
ರೋಗದ ಲಕ್ಷಣಗಳು : ಪ್ರಾರಂಭಿಕ ಹಂತದಲ್ಲಿ ಎಲೆಯ ಕವಚದ ಮೇಲೆ ಕಂದು ಅಂಚುಳ್ಳ ಒಣಗಿದ ಹುಲ್ಲಿನ ಬಣ್ಣದ ಅನಿರ್ಧಿಷ್ಟಾಕಾರದ ಮಚ್ಚೆಗಳು ಕಾಣಿಸಿಕೊಂಡು ಎಲೆಗಳು ಒಣಗುತ್ತವೆ. ನಂತರದ ಹಂತಗಳಲ್ಲಿ ಎಲೆ ಕವಚಗಳು ಹಾಗೂ ಗಿಡದ ಬುಡಗಳು ಕಪ್ಪಾಗಿ ಪೂರ್ತಿಯಾಗಿ ಕೊಳೆತಂತಾಗುತ್ತದೆ.
ನಿರ್ವಹಣಾ ಕ್ರಮಗಳು: ನೀರನ್ನು ಹೆಚ್ಚಾಗಿ ನಿಲ್ಲಿಸುವ ಜಮೀನುಗಳಲ್ಲಿ ಈ ರೋಗದ ಬಾಧೆ ಹೆಚ್ಚಾಗಿ ಕಂಡು ಬರುವುದರಿಂದ ನೀರನ್ನು ಬೆಳೆಗೆ ಕೊಡುವಾಗ ನೀರು ಇಂಗಿದ ಒಂದು ದಿನದ ನಂತರ 2 ಅಂಗುಲದಷ್ಟು ನೀರನ್ನು ನೀಡುವುದು. ಸಾವಯವ ಹಾಗೂ ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ರೈತರು 10 ಲೀ. ನೀರಿಗೆ 1 ಲೀ. ಹುಳಿ ಮಜ್ಜಿಗೆ ಬೆರೆಸಿ ಸಿಂಪಡಿಸುವುದು.
ರಾಸಾಯನಿಕ ಸಿಂಪರಣೆಗಾಗಿ 1 ಗ್ರಾಂ. ಕಾರ್ಬನ್ಡೈಜಿಂ 50 ಡಬ್ಲ್ಯುಪಿ ಅಥವಾ 1ಮಿ.ಲೀ. ಪ್ರೊಪಿಕೋನಜೋಲ್ 25 ಇ.ಸಿ ಅಥವಾ 2 ಮಿ.ಲೀ ಹೆಕ್ಸಾಕೋನಜೋಲ್ 5 ಇ.ಸಿ ಯನ್ನು 1 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಭತ್ತ ಕಟಾವಾದ ನಂತರ ಭೂಮಿಯನ್ನು ಉಳುಮೆ ಮಾಡಿ ದ್ವಿಧಳ ಧಾನ್ಯಗಳನ್ನು / ಹಸಿರೆಲೆ ಗೊಬ್ಬರಗಳನ್ನು ಬೆಳೆಯುವುದರಿಂದ ಮುಂದಿನ ಬೆಳೆಗೆ ಈ ರೋಗದ ಬಾಧೆ ಕಡಿಮೆಯಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.