ಡಿವಿಜಿ ಸುದ್ದಿ, ದಾವಣಗೆರೆ: ಕೃಷಿ ಇಲಾಖೆ ವತಿಯಿಂದ ಕಾಡಜ್ಜಿ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ಉಚಿತ ಪರಿಕರ ವಿತರಣೆ ಹಾಗೂ ಆತ್ಮ ಯೋಜನೆಯಡಿ ಮಣ್ಣು ಆರೋಗ್ಯ ಮತ್ತು ಅಂತರ ಬೆಳೆಯಾಗಿ ದ್ವಿದಳ ಧಾನ್ಯ ಬೆಳೆಗಳ ಮಹತ್ವ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಡಜ್ಜಿಯ ತಾಲ್ಲೂಕು ಪಂಚಾಯತ್ ಸದಸ್ಯರಾದ ಆಶಾ ಮುರುಳಿ ಇವರು ವಹಿಸಿ, ರೈತರನ್ನುದ್ದೇಶಿಸಿ ಮಾತನಾಡಿ ಕೊರೊನಾ ಭೀತಿಯ ನಡುವೆಯೂ ಸರ್ಕಾರದ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಹಮ್ಮಿಕೊಂಡು ಕೃಷಿ ಮತ್ತು ಕೃಷಿ ಸಂಬಂಧಿತ ವಿಚಾರಗಳ ಕುರಿತು ವಿಜ್ಞಾನಿಗಳನ್ನು ಕರೆದುಕೊಂಡು ಬಂದು ಮಾಹಿತಿ ಹಾಗೂ ಮಾರ್ಗದರ್ಶನ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀ. ಪ್ರತಿಯೊಬ್ಬ ರೈತರು ಕೂಡ ಇದರ ಸದುಪಯೋಗ ಪಡೆದುಕೊಂಡು ಒಳ್ಳೆಯ ಉತ್ಪಾದನೆ ಮಾಡಬೇಕು ಎಂದು ಮನವಿ ಮಾಡಿದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಯಾದ ಸಣ್ಣಗೌಡರು ಮಾತನಾಡಿ ಮಣ್ಣು ಆರೋಗ್ಯ, ಮಣ್ಣು ಪರೀಕ್ಷೆ, ಅದಕ್ಕನುಗುಣವಾಗಿ ಪೋಷಕಾಂಶಗಳ ಬಳಕೆ, ಬೆಳೆ ಪರಿವರ್ತನೆ, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರಗಳ ಬಳಕೆ ವಿವಿಧ ಬೆಳೆಗಳಲ್ಲಿ ಬರಬಹುದಾದ ರೋಗ, ಕೀಟಗಳ ನಿರ್ವಹಣೆ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ರೇವಣಸಿದ್ಧನಗೌಡ.ಹೆಚ್.ಕೆ. ಎನ್.ಎಫ್.ಎಸ್.ಎಂ. ಯೋಜನೆಯಡಿ ಬರುವ ಫಲಾನುಭವಿಗಳಿಗೆ ಪ್ರಾತ್ಯಕ್ಷಿಕೆ ನೀಡಿ ಹಾಗೂ ವಿಸ್ತೀರ್ಣಕ್ಕನುಗುಣವಾಗಿ ಪರಿಕರಗಳನ್ನು ವಿತರಣೆ ಮಾಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಗಿ, ಜೋಳ, ಸಿರಿಧಾನ್ಯಗಳಾದ ನವಣೆ, ಕೊರಲೆ, ದ್ವಿದಳ ಧಾನ್ಯ ಬೆಳೆಗಳಾದ ತೊಗರಿ, ಹೆಸರು, ಅಲಸಂದೆ ಬೆಳೆಗಳನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಉಚಿತವಾಗಿ ಪರಿಕರಗಳನ್ನು ನೀಡುತ್ತಿದ್ದು ಪ್ರತಿಯೊಬ್ಬ ರೈತರು ಈ ರೀತಿಯ ಬೆಳೆಗಳನ್ನು ಬೆಳೆಯುವ ಮೂಲಕ ಆಹಾರ ಉತ್ಪಾದನೆಯನ್ನು ಹೆಚ್ಚು ಮಾಡಬೇಕು ಎಂದು ತಿಳಿಸಿದರು ಹಾಗೂ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ, ಬೆಳೆ ಪರಿವರ್ತನೆ, ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಕೃಷಿ ನಿರ್ದೇಶಕರಾದ ರೇಖಾ, ಪ್ರತಿಭಾ, ಕೃಷಿ ಅಧಿಕಾರಿ ಲಾವಣ್ಯ, ಸಹಾಯಕ ಕೃಷಿ ಅಧಿಕಾರಿಗಳಾದ ದುರುಗಪ್ಪ, ಯೋಗೇಶಪ್ಪ, ವಸಂತಕುಮಾರ್, ಆತ್ಮ ಸಿಬ್ಬಂದಿ ವೆಂಕಟೇಶ್ ರೈತ ಅನುವುಗಾರರಾದ ರಾಜಪ್ಪ, ಸಿದ್ದಲಿಂಗಪ್ಪ, ಪ್ರಗತಿ ಪರ ರೈತರಾದ ಹನುಮಂತಪ್ಪ, ಚಂದ್ರಪ್ಪ ಹಾಗೂ ಗ್ರಾಮದ ರೈತರು ಭಾಗವಹಿಸಿದ್ದರು.



