ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ಪ್ರತಿ ಮಗುವೂ ಒಂದು ಅಮುಲ್ಯವಾದ ಸಂಪನ್ಮೂಲ. ಮಗುವನ್ನು ಅತಿ ಸೂಕ್ಷ್ಮತೆ ಮತ್ತು ಜವಾಬ್ದಾರಿಯಿಂದ ಬೆಳೆಸುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದೊಂದಿಗೆ ರಂದು ಜಿಲ್ಲಾಡಳಿತ ಭವನದಲ್ಲಿ ಸರ್ಕಾರಿ, ಖಾಸಗಿ ವೈದ್ಯರು, ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರಿಗೆ ‘ಮಕ್ಕಳ ದತ್ತು ಕಾರ್ಯಕ್ರಮ ಕುರಿತು ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಮಾನವೀಯತೆ ಹೊಂದಿರುವ ಪ್ರಜ್ಞಾವಂತ ಪ್ರಜೆಗಳಾಗಿರುವುದರಿಂದ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಮೌಲ್ಯಗಳ ಅನುಸರಣೆಯಿಂದ ಅನಾಥ ಮಕ್ಕಳ ಸಂಖ್ಯೆಯು ಕಡಿಮೆಯಾಗುತ್ತದೆ. ಒಪ್ಪಿಕೊಳ್ಳಲಾಗದ ಸಂಬಂಧದಿಂದ ಹುಟ್ಟಿದ ಮಕ್ಕಳು ಅನಾಥರಾಗುತ್ತಾರೆ. ಇಂತಹ ಸಮಸ್ಯೆಗಳಿಗೆ ಕಾನೂನಿನಲ್ಲಿ ಹಲವಾರು ಪರಿಹಾರ ಕ್ರಮಗಳಿವೆ. ಇದಕ್ಕೆ ಪರಿಹಾರಗಳನ್ನು ಕಂಡುಕೊಂಡು ಮಕ್ಕಳು ಅನಾಥವಾಗದಂತೆ ನೋಡಿಕೊಳ್ಳಬೇಕು ಎಂದರು.
ಆಶಾ ಕಾರ್ಯಕರ್ತೆಯರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಜನರಿಗೆ ಸಾಮಾಜಿಕ ಮೌಲ್ಯಗಳನ್ನು ತಿಳಿಸಬೇಕು. ಮಹಿಳೆಯರ ರಕ್ಷಣೆ ಮತ್ತು ಕ್ಷುಲ್ಲಕ ಕಾರಣಕ್ಕೆ ಮಕ್ಕಳನ್ನು ದೂರಮಾಡುವ ದಂಪತಿಗಳಿಗೆ ಕಾನೂನಿನ ಬಗ್ಗೆ ತಿಳಿಸಬೇಕು. ಮಕ್ಕಳನ್ನು ಅನಾಥ ಮಾಡುವುದು ತಪ್ಪು ಎಂದು ತಿಳಿಸಿ ಈ ಕೃತ್ಯ ಮಾಡುವ ಪಾಲಕರಿಗೆ ಮಾನಸಿಕ ಧೈರ್ಯವನ್ನು ನೀಡಿ ಅವರ ಆಲೋಚನೆಯನ್ನು ಬದಲಾಯಿಸಬೇಕು ಎಂದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಎಲ್ಲರಿಗೂ ಮಕ್ಕಳು ಬೇಕು ಎಂಬ ಆಸೆ ಇರುತ್ತದೆ ಅದರಲ್ಲೂ ತಮ್ಮದೇ ಮಗು ಬೇಕು ಎಂಬ ಕನಸು ಇರುತ್ತದೆ. ಈ ಕನಸು ಸಾಧ್ಯವಾಗದಿದ್ದಾಗ ಕಾನೂನಿನ್ವಯ ದತ್ತು ಪಡೆಯುವುದರ ಮೂಲಕ ಸಂತೋಷದಾಯಕ ಜೀವನ ನಡೆಸಬಹುದು ಎಂದರು.
ಮಹಿಳೆಯರು ಕಾನೂನಾತ್ಮಕ ಸಮಸ್ಯೆಯನ್ನು ಎದುರಿಸಲು ಸಿದ್ದರಿರಬೇಕು. ಕಾನೂನಿನ ಅರಿವನ್ನು ಆಶಾ ಕಾರ್ಯಕರ್ತೆಯರು ಮಹಿಳೆಯರಿಗೆ ತಿಳಿಸಬೇಕು. ಶಿಕ್ಷಣದಿಂದ ಇಂದು ನಾವು ಸಮಾಜದ ಭಾಗವಾಗಿದ್ದೇವೆ. ಆದ್ದರಿಂದ ನಮಗೆ ಇತರ ಮಕ್ಕಳ ಬಗ್ಗೆಯೂ ಕಾಳಜಿ ಇರಬೇಕು. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಅನಾಥ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ನಾವೆಲ್ಲ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, ಮಕ್ಕಳನ್ನು ಪಾಲಕರಿಗೆ ದತ್ತು ನೀಡುವಿಕೆ ಬಗ್ಗೆ ಹಲವು ಕಾನೂನುಗಳಿವೆ. ಅನೇಕ ಕಾರಣಗಳಿಂದ ಮಕ್ಕಳು ಅನಾಥರಾಗುತ್ತಾರೆ. ಅತ್ತೆ-ಸೊಸೆಯ ಜಗಳ, ಬುದ್ಧಿಮಾಂದ್ಯ ಮಕ್ಕಳ ಜನಿಸುವಿಕೆ ಮತ್ತು ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳು, ಹೆಣ್ಣು ಮಗು ಎಂಬ ಕಾರಣಗಳಿಂದ ಮಕ್ಕಳನ್ನು ಅನಾಥರನ್ನಾಗಿಸಲಾಗುತ್ತಿದೆ.ಕಸದ ಬುಟ್ಟಿಯಲ್ಲಿ ಬಿಡುವ ಕೆಲಸವನ್ನೂ ಹಲವರು ಮಾಡುತ್ತಾರೆ. ಇಂತಹ ವಿಷಯಗಳ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ತಿಳುವಳಿಕೆ ಇರಬೇಕು ಎಂದರು.
ಹೊನ್ನಾಳಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ, ಜಗಳೂರು ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಪ್ಪ, ಎಲ್ಲಾ ತಾಲ್ಲೂಕುಗಳ ಆಶಾ ಕಾರ್ಯಕರ್ತೆಯರು, ಜಿಲ್ಲಾ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು