ಡಿವಿಜಿಸುದ್ದಿ.ಕಾಂ, ದಾವಣಗೆರೆ: ವಿದ್ಯಾರ್ಥಿಗಳು ಪದವಿ ಶಿಕ್ಷಣದ ಜೊತೆಗೆ ಬೇರೆ ಬೇರೆ ತರಬೇತಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ದಾವಣಗೆರೆ ವಿ.ವಿ ಕುಲಸಚಿವ ಪ್ರೊ. ಬಸವರಾಜ್ ಬಣಕಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಎ.ವಿ. ಕಮಲಮ್ಮ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ 2019 ನೇ ಸಾಲಿನ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ, ಕ್ರೀಡೆ, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್, ಎನ್ಸಿಸಿ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮೊದಲು ತಮ್ಮ ಜವಾಬ್ದಾರಿ ತಿಳಿದುಕೊಳ್ಳಬೇಕು. ಶೈಕ್ಷಣಿಕ ಅವಧಿ ಮುಗಿಯುವುದರೊಳಗೆ ಎಲ್ಲಾ ತರಬೇತಿ ಪಡೆದುಕೊಂಡಿರಬೇಕು. ಇದರಿಂದ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.

ಎಲ್ಲರಿಗೂ ಅವರದ್ದೇ ಆದ ವಿಶಿಷ್ಟ ಸಾಮರ್ಥ್ಯವಿರುತ್ತದೆ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಸದೃಢ ದೇಹ, ಮನಸ್ಸಿನ ನಿಗ್ರಹ, ಮಾತಿನ ಮೇಲೆ ಹಿಡಿತ, ಯೋಚನಾ ಶಕ್ತಿಯನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಂಡರೆ ದೊಡ್ಡ ಸಾಧನೆ ಸಾಧಿಸಲು ನೆರವಾಗಲಿದೆ. ಜ್ಞಾನ ಸಂಪಾದನೆಗೆ ಮೊಬೈಲ್ ಬಳಕೆ ಮಾಡಿ. ವಿಷಯ ತಜ್ಞರ ಪುಸ್ತಕಗಳನ್ನು ಹೆಚ್ಚಾಗಿ ಓದುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎವಿಕೆ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ.ಎಸ್.ಶಿವಪ್ರಕಾಶ್, ಕರ್ನಾಟಕ ರಾಜ್ಯ ವಿವಿ ಹಾಗೂ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ. ಸಿ.ಎಚ್. ಮುರಿಗೇಂದ್ರಪ್ಪ, ಎವಿಕೆ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಜೆ. ಶಿವಪ್ಪ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಬಿ.ಪಿ. ಕುಮಾರ್, ಪದವಿ ಪೂರ್ವ ವಿಭಾಗದ ಕಾರ್ಯದರ್ಶಿಗಳಾದ ಮಾರಿಯ ಮಿಸ್ಬ, ಎಂ.ಎಂ.ಸೂರ್ತಿ, ಆರ್.ಚೈತ್ರ, ಡಿ.ರಾಜೇಶ್ವರಿ, ಪಿ.ಎ. ಸಂಜನ, ಎ.ಜೆ. ಶ್ರೇಯಾ ಇತರರು ಇದ್ದರು.



