ಡಿವಿಜಿ ಸುದ್ದಿ, ದಾವಣಗೆರೆ: ಇಂದು ಜಿಲ್ಲೆಯಲ್ಲಿ 3 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಸಂಪೂರ್ಣರಾಗಿ ಗುಣಮುಖರಾದ 7 ಜನರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬೀಳ್ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಶುಕ್ರವಾರ ಜಿಲ್ಲೆಯಲ್ಲಿ ಮೂರು ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಪಿ-1656, ಪಿ-1657, ಪಿ-1658 ಇವರೆಲ್ಲರೂ ಹಿಂದಿನವರ ಸಂಪರ್ಕ ಹೊಂದಿದ್ದು, ಜಾಲಿನಗರದ ಕಂಟೈನ್ಮೆಂಟ್ ಜೋನ್ ಒಳಗೆ ಬರುವವರು ಎಂದು ತಿಳಿಸಿದರು.
ಇಂದು ಒಟ್ಟು 7 ಜನ ಕೊರೊನಾದಿಂದ ಗುಣಮುಖರಾದವರನ್ನು ಬಿಡುಗಡೆ ಮಾಡಲಾಗಿದೆ. ಈ 7 ಜನರು ಪಿ-533, 581, 660, 661, 665, 666 ಹಾಗೂ 696 ಇಬ್ಬರು ಪುರುಷರು ಹಾಗೂ 5 ಜನ ಹೆಣ್ಣು ಮಕ್ಕಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಹಳೆಯ 14 ಜನರು ಹಾಗೂ ಇಂದು 7 ಜನರು ಸೇರಿ ಒಟ್ಟು 21 ಜನರನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 118 ರಲ್ಲಿ 93 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದರು.
ಆದಷ್ಟು ಬೇಗ ಎಲ್ಲರೂ ಗುಣಮುಖರಾಗುವ ವಿಶ್ವಾಸ ಇದೆ. ಅವರನ್ನು ಕೂಡ ಪ್ರೋಟೊಕಾಲ್ ಪ್ರಕಾರ ಒಳ್ಳೆಯ ಚಿಕಿತ್ಸೆ ನೀಡಿ, ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆದಷ್ಟು ಬೇಗ ಗುಣಮುಖರಾನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. 14 ದಿನ ಮುಗಿದವರದ್ದು ಸ್ಯಾಂಪಲ್ ಮರು ಸಂಗ್ರಹಿಸಿ ಕಳುಹಿಸಿದ್ದು, ಒಂದಿಷ್ಟು ಜನರ ವರದಿ ಬಂದಿದೆ. ಕೆಲವರನ್ನು ನಾಳೆಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.

ಯಾರೊಬ್ಬರೂ ಭಯ ಪಡಬೇಕಿಲ್ಲ. ಪ್ರತಿಯೊಬ್ಬರು ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಜೊತೆಗೆ ಕಂಟೈನ್ಮೆಂಟ್ ಜೋನ್ ಒಳಗೆ ಹೋಗುವವರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದರು. ಇದೇ ವೇಳೆ ರೋಗಿಗಳನ್ನು ಚೆನ್ನಾಗಿ ಉಪಚರಿಸಿದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಓ ಪದ್ಮಾ ಬಸವಂತಪ್ಪ, ಎಸಿ ಮಮತಾ ಹೊಸಗೌಡರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ ನಾಯಕ್, ಮಹಾನಗರಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದಜ್ಜಿ, ಎಎಸ್ಪಿ ರಾಜೀವ್, ಡಿಎಚ್ಒ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರಚಿತ್ಸಕ ಸುಭಾಷಚಂದ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಇದ್ದರು.



