ಡಿವಿಜಿ ಸುದ್ದಿ, ದಾವಣರೆಗೆ: ಕೊರೊನಾ ವೈರಸ್ ನಿಯಂತ್ರಣದಲ್ಲಿ ಎಲ್ಲರ ಸತತ ಪ್ರಯತ್ನದಿಂದ ಜಿಲ್ಲೆಯ 3 ಕೊರೋನಾ ಪಾಸಿಟಿವ್ ಪ್ರಕರಣಗಳು ನೆಗೆಟಿವ್ ಬಂದಿದ್ದು ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಎದುರಿಸಲು ನಾವು ಹೇಗೆ ಸಜ್ಜಾಗಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಏರ್ಪಡಿಸಲಾಗಿದ್ದ ಕೋವಿಡ್-19 ಸ್ವಯಂ ಸೇವಕರ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಡಳಿತ ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳು 24*7 ನಂತೆ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ನಮ್ಮೊಂದಿಗೆ ಕೈ ಜೋಡಿಸಲು ಸ್ವಯಂ ಸೇವಕರು ಮುಂದೆ ಬಂದಿರುವುದು ಅತ್ಯಂತ ಸ್ವಾಗತಾರ್ಹ ಹಾಗೂ ಜಿಲ್ಲಾಡಳಿತ ನಿಮ್ಮ ಸೇವೆಯನ್ನು ಸಾರ್ಥಕವಾಗಿ ಬಳಸಿಕೊಳ್ಳುತ್ತದೆ ಎಂದರು.
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯ ಸ್ಥಿತಿ ಉತ್ತಮವಾಗಿದ್ದು ಈ ಸಮಯದಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಬಂದವರು 19 ಸಾವಿರ ಜನರ ನಿಗಾ ವಹಿಸುವ ಹೊಣೆ ನಮ್ಮ ಮೇಲಿದೆ. ಅವರಲ್ಲಿ ಕೆಲವರು ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಜಿಲ್ಲೆಯಲ್ಲಿದ್ದ ಮೂರು ಪಾಸಿಟಿವ್ ಪ್ರಕರಣಗಳ ಸೋಂಕಿತರು ಗುಣಮುಖ ಹೊಂದಿದ್ದು ಅವರ ಪರೀಕ್ಷೆ ವರದಿ ನೆಗೆಟಿವ್ ಎಂದು ಬಂದಿದೆ. ಐಸೋಲೆಷನ್ನಲ್ಲಿ ವಾರ್ಡ್ನಲ್ಲಿದ್ದ ಇಬ್ಬರು ಬಿಡುಗಡೆಯಾಗಿದ್ದಾರೆ. ಇನ್ನೊಬ್ಬ ಸೋಂಕಿತರ ಬಿಡುಗಡೆ ಬಗ್ಗೆ ಇಂದು ತೀರ್ಮಾನಿಸಲಾಗುವುದು ಎಂದರು.
ರೈತರ ಗಮನಕ್ಕೆ : ಜಿಲ್ಲೆಯಲ್ಲಿ ಭತ್ತ ಕಟಾವಿಗೆ ಬಂದಿದ್ದು, ಭತ್ತ ಬೆಳೆದ ರೈತರಿಗೆ ಭತ್ತ ಕೊಯ್ಯುವ ಯಂತ್ರ ಅವಶ್ಯವಿದ್ದಲ್ಲಿ ಸಂಬಧಿಸಿದ ರೈತರು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್ ಅವರಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಡಿಎಚ್ಓ ಡಾ. ರಾಘವೇಂದ್ರಸ್ವಾಮಿ ಮಾತನಾಡಿ, ಸಾರ್ವಜನಿಕರೆಲ್ಲರೂ ಸಹ ಮಾಸ್ಕ್ ಹಾಕಿಕೊಳ್ಳುವ ಅಗತ್ಯವಿಲ್ಲ. ಜನರೊಂದಿಗೆ ವ್ಯವಹರಿಸುವಾಗ ಹಾಗೂ ಸೋಂಕಿತ ಮತ್ತು ಶಂಕಿತ ವ್ಯಕ್ತಿಗಳ ಹತ್ತಿರವಿರುವಾಗ ಮಾತ್ರ ಮಾಸ್ಕ್ ಬಳಸುವಂತೆ ತಿಳಿಸಿದರು. ಎನ್ 95 ಮಾಸ್ಕ್ ಗಳನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಬಳಸಬೇಕು. ಸಾಮಾನ್ಯ ಜನರು ಸಾಮಾನ್ಯವಾಗಿರುವ ಮಾಸ್ಕ್ ಬಳಸಲು ಸಲಹೆ ನೀಡಿದರು. ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡು ರೋಗ ನಿಯಂತ್ರಿಸಿ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ , ಡಿ.ಎಲ್.ಓ. ಡಾ ಮುರಳಿಧರ, ಡಾ.ಗಂಗಾಧರ್, ಕೆ.ಐ.ಎ.ಡಿ.ಬಿ.ಯ ಅಧಿಕಾರಿ ಸರೋಜ, ಕುಟುಂಬ ಕಲ್ಯಾಣಾಧಿಕಾರಿ ರೇಣುಕಾರಾದ್ಯ, ವಿಷೇಶ ಭೂಸ್ವಾಧಿನಾಧಿಕಾರಿ ರೇಶ್ಮಾ ಹಾನಗಲ್ ಮತ್ತು ಡಿಐಪಿಆರ್ ಸ್ವಯಂ ಸೇವಕರು, ರೆಡ್ಕ್ರಾಸ್, ಲಾ ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳ ಸ್ವಯಂ ಸೇವಕರು ಉಪಸ್ಥಿತರಿದ್ದರು.