ದಾವಣಗೆರೆ: ಅವಧಿ ಮುಗಿದರೂ ಚೀಟಿ ಹಣ ಮರುಪಾವತಿಸದೆ ಸೇವಾ ನ್ಯೂನತೆ ತೋರಿದ ಚನ್ನಗಿರಿ ಪಟ್ಣದ ನಿತ್ಯೋತ್ಸವ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 35 ಸಾವಿರ ದಂಡ ವಿಧಿಸಿದೆ.
ಚೀಟಿಯ ಮೊತ್ತ 50 ಲಕ್ಷ ಜತೆ ಶೇ. 9ರಷ್ಟು ಬಡ್ಡಿ ಪಾವತಿಸಬೇಕು. ಇದಲ್ಲದೆ ಸಂತ್ರಸ್ತರಿಗೆ ಮಾನಸಿಕ ಹಿಂಸೆ ಮತ್ತು ದೂರಿನ ವೆಚ್ಚ ಪಾವತಿಸಲು ಒಂದು ತಿಂಗಳ ಗಡುವು ನೀಡಿ ಆದೇಶಿಸಿದೆ.
ಚನ್ನಗಿರಿಯ ಜಬೀನ್ ಖಾನಂ ಅವರು ನಿತ್ಯೋತ್ಸವ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ 50 ಲಕ್ಷದ ಚೀಟಿ ಮಾಡಿದ್ದರು. ಇದಕ್ಕೆ ಮಾಸಿಕ 2 ಲಕ್ಷ ರೂಗಳಂತೆ 25 ಕಂತುಗಳನ್ನು ಪಾವತಿಸಿದ್ದರು. ಚೀಟಿ ಮುಕ್ತಾಯದ ಬಳಿಕ ಸಂಸ್ಥೆ ಹಣ ನೀಡದಿರುವುದರಿಂದ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.ಆಯೋಗದ ಅಧ್ಯಕ್ಷೆ ಎಚ್.ಎನ್. ಮೀನಾ ಹಾಗೂ ಸದಸ್ಯ ಸಿ.ಎಸ್. ತ್ಯಾಗರಾಜನ್ ಅವರು ಪ್ರಕರಣದ ವಿಚಾರಣೆ ನಡೆಸಿದರು.



