ಡಿವಿಜಿ ಸುದ್ದಿ, ಭರಮಸಾಗರ: ಭರಮಸಾಗರ ಕೆರೆ ತುಂಬಿಸುವ ಏತ ನೀರಾವರಿ ಕಾಮಗಾಗಿ ಮುಗಿದ 23 ದಿನಗಳಲ್ಲಿ ಕೆರೆ ತುಂಬುವುದು ಎಂದು ತರಳಬಾಳು ಬಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.
ಮಲ್ಲಶೆಟ್ಟಿಹಳ್ಳಿ ಕೆರೆ, ಭರಮಸಾಗರ ಏತನೀರಾವರ ಯೋಜನೆ ಕಾಮಗಾರಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡರೆ ಕೆರೆ ಬೇಗ ತುಂಬುತ್ತದೆ. ಆಗಸ್ಟ್ ತಿಂಗಳಲ್ಲಿ ಭರಮಸಾಗರ ಕೆರೆಗೆ ನೀರು ಬರುವ ನಿರೀಕ್ಷೆಯಿದೆ ಎಂದರು.
ಅಧಿಕಾರಿಗಳು ನಕ್ಷೆಯೊಂದಿಗೆ ಸ್ವಾಮೀಜಿಗೆ ವಿವರಿಸಿದರು. ಗ್ರಾಮದ ಮುಖಂಡರು, ಏತನೀರಾವರಿ ಹೋರಾಟ ಸಮಿತಿ ಸದಸ್ಯರು, ರೈತರು ಭಾಗಿಯಾಗಿದ್ದರು. ಭರಮಸಾಗರದಿಂದ ಮಲಶೆಟ್ಟಿಹಳ್ಳಿಗೆ ತೆರಳಿ ನೂತನವಾಗಿ ನಿರ್ಮಿಸಿರುವ ಕೆರೆಯನ್ನು ಪರಿಶೀಲಿಸಿದರು.
ಸಮೀಪದ ಒಂದು ಎಕರೆ ಜಾಗದಲ್ಲಿ ಗೋಕಟ್ಟೆ ನಿರ್ಮಿಸಬೇಕು. ಜಾಕ್ವೆಲ್ಗೆ ಬರುವ ನೀರು ಹಾಗೂ ಹೊರ ಹೋಗುವ ನೀರು ಗೊತ್ತಾಗುವ ರೀತಿ ಪೈಪ್ ಅಳವಡಿಸಬೇಕು ಎಂದು ಆಭಾಗದ ರೈತರು ಮನವಿ ಮಾಡಿದರು. ಮಲ್ಲಶೆಟ್ಟಿ ಹಳ್ಳಿಯ ಕೆರೆ, ಜಾಕ್ವೆಲ್ ಕೆಲಸಗಳಿಗೆ 5 ಕೋಟಿ ನೀಡಲಾಗುವುದು. ಅದರಲ್ಲಿ ಗೋಕಟ್ಟೆಗೂ ಹಣ ನೀಡುವುದಾಗಿ ನೀರಾವರಿ ನಿಗಮದ ನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ್ ಗುಂಗೆ ತಿಳಿಸಿದರು.
ನಂತರ ಹರಿಹರದ ಹಲಸಬಾಳು ಗ್ರಾಮದ ತುಂಗಭದ್ರಾ ನದಿಯ ಬಳಿಯ ಜಾಕ್ವೆಲ್ ಬಳಿ ನಿರುಸಂಗ್ರಹಣಾ ಕಾಮಗಾರಿ ಹಾಗೂ ಪೈಪ್ ಲೈನ್ ಅಳವಡಿಕೆಗೆ ಸಿದ್ದಪಡಿಸುತ್ತಿರುವ ಕಾಮಗಾರಿ ವೀಕ್ಷಿಸಿದರು. ಜಗಳೂರು ಕೆರೆ ನೀರು ಹರಿಸುವ ಯೋಜನೆಯ ಜಾಕ್ವೆಲ್ ಪರಿಶೀಲನೆ ನಡೆಸಿದರು.
ನೀರಾವರಿ ನಿಗಮದ ನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಪ್ರಸನ್ನ, ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಯತೀಶ್ ಚಂದ್ರ, ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಪ್ಪ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್, ಏತನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಮಂಜುನಾಥ್ ಗೌಡ್ರು, ಶಶಿಪಾಟೀಲ್, ರೈತ ಮುಖಂಡರು, ಗ್ರಾಮಸ್ಥರು ಇದ್ದರು.



