ದಾವಣಗೆರೆ: ತೀವ್ರ ಬಿಸಿಲಿನ ತಾಪಮಾನದಿಂದ ಬಸವಳಿದಿದ್ದ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಮಳೆ ಸುರಿದಿದೆ. ಹರಿಹರ, ದಾವಣಗೆರೆ ಸುತ್ತಮುತ್ತಲಿನ ಕೆಲ ಪ್ರದೇಶದಲ್ಲಿ ಜೋರು ಮಳೆಯಾಗಿದೆ. ಕೆಲ ಪ್ರದೇಶದಲ್ಲಿ ಬಿರು ಗಾಳಿ, ಗುಡುಗು,ಮಿಂಚು ಸಹಿತ ಆಲಿಕಲ್ಲು ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ರಾತ್ರಿ ಮಳೆ ತಂಪೆರೆದಿದೆ.
ವರುಣ ಆಗಮನದಿಂದ ದಾವಣಗೆರೆ ನಗರದಲ್ಲಿ ತಂಪನೆ ವಾತಾವರಣ ನಿರ್ಮಾಣವಾಗಿದೆ. ರಾತ್ರಿ 8.30ರ ವೇಳೆಗೆ ಏಕಾಏಕಿ ಶುರುವಾದ ಮಳೆ ಮಿಂಚು, ಗುಡುಗು ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದಿದೆ. ಮಳೆಯ ಆರಂಭವಾಗುತ್ತಿದ್ದಂತೆ ಅಲ್ಲಲ್ಲಿ ಆಲಿಕಲ್ಲುಗಳು ಬಿದ್ದವು. ದಾವಣಗೆರೆ ಬಳಿಯ ಬೇತೂರು, ಬಸಾಪುರ, ರಾಂಪುರ, ಬಸವನಾಳ್ ಸೇರಿ ಸುತ್ತಮುಲ್ಲಿನ ಗ್ರಾಮಗಳಲ್ಲಿ ಮಳೆಯಾಗಿದೆ.
ಮುಂದಿನ ಮೂರ್ನಾಲ್ಕು ದಿನ ಮಳೆ ಮುನ್ಸೂಚನೆ
ರಸ್ತೆ, ಮನೆ ತಾರಸಿ ಮೇಲೆ ಹೂವಿನಂತೆ ಚೆಲ್ಲಿದ್ದ ಆಲಿಕಲ್ಲುಗಳನ್ನು ಕಂಡು ಜನ ಪುಳಕಿತರಾದರು. ಮಳೆಯಲ್ಲಿ ಆಲಿಕಲ್ಲು ಆಯ್ದು ಸಂಭ್ರಮಿಸಿದರು. ಏಕಾಏಕಿ ಮಳೆಯಿಂದ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕೆರೆಯಂತಾಗಿತ್ತು. ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದ ಪರಿಣಾಮ ವಾಹನ ಸಂಚಾರಕ್ಕೆ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು.
ಹಹರಿಹರ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ತಾಲ್ಲೂಕಿನ ಗುತ್ತೂರು, ದಿಟೂರು, ಕೊಂಡಜ್ಜಿ ಸಾರಥಿ, ಗಂಗನಹರಸಿ, ಹನಗವಾಡಿ, ಹಲಸಬಾಳು, ಬನ್ನಿಕೋಡು, ಬೆಳ್ಳೂಡಿ ಹಾಗೂ ರಾಮತೀರ್ಥ ಗ್ರಾಮಗಳಲ್ಲಿ ಮಳೆಯಾಗಿದೆ.



