ದಾವಣಗೆರೆ: ದಾವಣಗೆರೆ ದಕ್ಷಿಣ ಉಪ ಚುನಾವಣೆ ಕಾಂಗ್ರೆಸ್ ಟಿಕೆಟ್ ಯಾರಿಗೆ ಟಿಕೆಟ್ ಸಿಗುತ್ತದೆಯೋ, ಯಾರು ಗೆಲ್ಲುತ್ತಾರೆ ಎಂಬುದು ದೇವರಿಗೇ ಗೊತ್ತು. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಕಾದು ನೋಡೋಣ. ನಾಳೆ ಉಸ್ತುವಾರಿ ಸಮಿತಿ ಸದಸ್ಯರು ಬಂದು ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಚುನಾವಣೆ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದ್ದು, ಮೈನಾರಿಟಿ, ಅಹಿಂದ ಅಥವಾ ಬೇರೆ ಸಮುದಾಯ ಎಂಬುವುದಕ್ಕಿಂತ ಮುಖ್ಯವಾಗಿ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಮಾತ್ರ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಎಸ್. ಮಲ್ಲಿಕಾರ್ಜುನ ಸ್ಪಷ್ಟಪಡಿಸಿದರು.
ಗೆಲ್ಲುವ ಅಭ್ಯರ್ಥಿಗಷ್ಟೇ ಮಾನ್ಯತೆ
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಬಾವುಟ ಹಿಡಿದು ಕಷ್ಟಕಾಲದಲ್ಲಿ ಕೆಲಸ ಮಾಡಿದವರಿಗೆ ಮಾನ್ಯತೆ ಸಿಗಬೇಕು. ಎಲೆಕ್ಷನ್ ಬಂದಾಗ ಬಂದು ಭಾಷಣ ಮಾಡುವವರಲ್ಲ, ವರ್ಷವಿಡೀ ಕೆಲಸ ಮಾಡಿದ ಕಾರ್ಯಕರ್ತರ ವಿಶ್ವಾಸ ನಮಗೆ ಮುಖ್ಯ.ಗೆಲ್ಲುವ ಅಭ್ಯರ್ಥಿಗಷ್ಟೇ ಮಾನ್ಯತೆ ಎಂದರು.
ಅಬ್ದುಲ್ ಜಬ್ಬಾರ್ ವಿರುದ್ಧ ಕಿಡಿ
‘ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದಿದ್ದರೆ ಜನರೇ ತೀರ್ಮಾನ ಮಾಡುತ್ತಾರೆ’ ಎಂಬ ಅಬ್ದುಲ್ ಜಬ್ಬಾರ್ ಅವರ ಹೇಳಿಕೆಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಅವರವರ ವೈಯಕ್ತಿಕ ವಿಚಾರಗಳ ಬಗ್ಗೆ ನಾನು ಹೆಚ್ಚು ಮಾತನಾಡಲಾರೆ. ಅವರು ಹಿಂದೆ ಹೇಗಿದ್ದರು, ಈಗ ಹೇಗಿದ್ದಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಈಗ ಎಲ್ಲರೂ ದೊಡ್ಡವರಾಗಿದ್ದಾರೆ. ಸಣ್ಣವರು ಯಾರು ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಬಿಜೆಪಿ , ಮುಸ್ಲಿಂ ಅಭ್ಯರ್ಥಿ ಅಡ್ಜಸ್ಟ್ಮೆಂಟ್?
ಇದೇ ವೇಳೆ ಒಂದು ಹೆಜ್ಜೆ ಮುಂದೆ ಹೋದ ಸಚಿವರು ವಿರೋಧ ಪಕ್ಷ ಬಿಜೆಪಿಯ ನಡೆಯನ್ನು ಲೇವಡಿ ಮಾಡಿದರು. ಕಾಂಗ್ರೆಸ್ನಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ಬಿಜೆಪಿಯವರೇ ಕೇಳುತ್ತಿದ್ದಾರೆ. ಇವರಿಬ್ಬರ ನಡುವೆ ಏನು ಅಡ್ಜಸ್ಟ್ಮೆಂಟ್ ನಡೆದಿದೆಯೋ ಗೊತ್ತಿಲ್ಲ ಎಂದರು.
ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಾಕಬಾರದು
ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಅವರಿಗೆ ಟಿಕೆಟ್ ನೀಡಬೇಕೆಂದು ಬೆಂಬಲಿಗರು ಸಿಎಂ ಮತ್ತು ಡಿಸಿಎಂ ಅವರಿಗೆ ಮನವಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಜನರಿಗೆ ಅವರ ಮೇಲೆ ಅಭಿಮಾನವಿರಬಹುದು. ಆದರೆ ನಾನೇ ಬೇಡ ಅಂದಿದ್ದೇನೆ. ಪಾರ್ಟಿ ಯಾರಿಗೆ ಡಿಸೈಡ್ ಮಾಡುತ್ತದೆಯೋ ಅವರಿಗೆ ಟಿಕೆಟ್ ಕೊಡಲಿ. ಬಾಗಲಕೋಟೆಯಲ್ಲಿ ಹೆಚ್.ವೈ. ಮೇಟಿ ಕುಟುಂಬಕ್ಕೆ ಟಿಕೆಟ್ ನೀಡುವ ವಿಚಾರದ ಬಗ್ಗೆಯೂ ಚರ್ಚೆ ಇದೆ. ಪಕ್ಷವು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಮಾಡಬಾರದು’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಒಟ್ಟಾರೆಯಾಗಿ ದಾವಣಗೆರೆ ದಕ್ಷಿಣದ ಟಿಕೆಟ್ ಹಂಚಿಕೆ ಪ್ರಕ್ರಿಯೆ ಕಾಂಗ್ರೆಸ್ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ. ನಾಳೆ ನಡೆಯಲಿರುವ ಉಸ್ತುವಾರಿ ಸಮಿತಿ ಸಭೆಯ ಬಳಿಕ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ.



