ಬೆಂಗಳೂರು/ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ (By election) ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯುವ ಜಿದ್ದಾಜಿದ್ದಿ ತಾರಕಕ್ಕೇರಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಟಾಕ್ ಫೈಟ್ ಹೆಚ್ಚಾಗಿದೆ. ದಾವಣಗೆರೆ ದಕ್ಷಿಣ ನನ್ನ ಕ್ಷೇತ್ರದಲ್ಲಿ ಮುಸ್ಲಿಂಗೆ ಟಿಕೆಟ್ ಕೇಳೋಕೆ ಅವನ್ಯಾವನು ( ಸಚಿವ ಜಮೀರ್ ಅಹ್ಮದ್ ) ಎಂದು ಏಕ ವಚನದಲ್ಲಿಯೇ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಕಿಡಿಕಾರಿದ್ದರು.
ಈ ಬಗ್ಗೆ ಸಚಿವ ಜಮೀರ್ ಅಹ್ಮದ್ (Zameer ahemad khan) ಪ್ರತಿಕ್ರಿಯಿಸಿದ್ದು, ಟಿಕೆಟ್ ನೀಡುವ ಅಧಿಕಾರ ಹೈಕಮಾಂಡ್ಗೇ ಸೇರಿದ್ದು, ತಾವು ಕೇವಲ ಕೇಳುವ ಹಕ್ಕು ಹೊಂದಿದ್ದೇವೆ. ಟಿಕೆಟ್ ಕೇಳುವ ಹಕ್ಕು ಎಲ್ಲರಿಗೂ ಇದೆ ಎಂದು ಸಚಿವ ಜಮೀರ್ ತಿರುಗೇಟು ನೀಡಿದ್ದಾರೆ
ಟಿಕೆಟ್ ನೀಡೋದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಲ್ಲ
ದಾವಣಗೆರೆ ದಕ್ಷಿಣಕ್ಜೆ ತಾವಾಗಲಿ ಅಥವಾ ಎಸ್.ಎಸ್. ಮಲ್ಲಿಕಾರ್ಜುನ್ ಆಗಲಿ ಟಿಕೆಟ್ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅಭ್ಯರ್ಥಿಯ ಕುರಿತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ದಾವಣಗೆರೆ ಕಾಂಗ್ರೆಸ್ನ ಭದ್ರಕೋಟೆ.ಹೀಗಾಗಿ ಯಾರಿಗೇ ಅವಕಾಶ ನೀಡಿದರೂ ಕಾಂಗ್ರೆಸ್ ಗೆಲುವು ಸಾಧ್ಯ ಎಂದಿದ್ದಾರೆ.
ಅಲ್ಪಸಂಖ್ಯಾತರಿಗೆ ಮಾತು ಕೊಟ್ಟಿದ್ದ ಶಾಮನೂರು ಶಿವಶಂಕರಪ್ಪ
ಹಿಂದಿನ ಚುನಾವಣೆಯ ಸಂದರ್ಭದಲ್ಲೇ ಶಾಮನೂರು ಶಿವಶಂಕರಪ್ಪ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವ ಬಗ್ಗೆ ಮಾತು ಕೊಟ್ಟಿದ್ದರು. ಈ ಬಗ್ಗೆ ಸಮುದಾಯ ನಾಯಕರು ನನ್ನ ಬಳಿ ಬಂದು ಈ ಬಾರಿ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ಕೊಡಿಸುವಂತೆ ಕೇಳಿಕೊಂಡರು. ಹೀಗಾಗಿ ನಾನು ಟಿಕೆಟ್ ಕೇಳಿದ್ದೇನೆ. ಶಾಮನೂರು ಶಿವಶಂಕರಪ್ಪ ಹೇಳಿದನ್ನು ಸಮುದಾಯದ ನಾಯಕರು ನೆನಪಿಸಿದ್ದಾರೆ. ಸುಮಾರು 80 ಸಾವಿರ ಅಲ್ಪಸಂಖ್ಯಾತ ಮತಗಳಿರುವ ಹಿನ್ನೆಲೆಯಲ್ಲಿ ಈ ಬಾರಿ ಅವರಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿರುವುದಾಗಿ ಜಮೀರ್ ಹೇಳಿದ್ದಾರೆ.
ಹೈಕಮಾಂಡ್ಗೆ ವರದಿ ಸಲ್ಲಿಕೆ
ಇನ್ನು ತಮ್ಮ ಬಳಿ ಬಂದ ಬೇಡಿಕೆಯನ್ನು ಹೈಕಮಾಂಡ್ಗೆ ವರದಿ ಮಾಡುವುದಾಗಿ ಹೇಳಿದ ಜಮೀರ್, ಕಾಂಗ್ರೆಸ್ ಪಕ್ಷದ ಎಲ್ಲ ಕ್ಷೇತ್ರಗಳೂ ಪಕ್ಷದ್ದೇ ಆಗಿವೆ ಎಂದು ಹೇಳಿದರು. ಅಗತ್ಯವಿದ್ದರೆ ತಮ್ಮ ಕ್ಷೇತ್ರದ ಟಿಕೆಟ್ ಕೂಡ ಬಿಟ್ಟು ಕೊಡಲು ಸಿದ್ಧ ಎಂದು ಅವರು ಹೇಳಿದ್ದಾರೆ.



