ದಾವಣಗೆರೆ: ರಸ್ತೆ ಬದಿ ನಿಂತಿದ್ದ ಲಾರಿಗೆ ಅತೀ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ನಡೆದಿದೆ.
ಈ ಅಪಘಾತದಲ್ಲಿ ಕಾರನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚನ್ನಗಿರಿ-ಬೀರೂರು ಹೆದ್ದಾರಿಯ ಮಸಣಿಕೆರೆ ಕ್ರಾಸ್ ಬಳಿ ಇಂದು (ನ.17) ಬೆಳಗ್ಗೆ ನಡೆದಿದೆ. ಅಬಕಾರಿ ಇಲಾಖೆಯ ಉಮೇಶ್ (38) ಮೃತರು. ಮಲ್ಲಿಕಾರ್ಜುನ್(38), ಅವಿನಾಶ್(25), ಯಾಸಿನ್ ಖಾನ್(30) ಮತ್ತು ಮಹಾಂತೇಶ್ (36) ಗಂಭೀರವಾಗಿ ಗಾಯಗೊಂಡವರು.
ಅಪಘಾತಕ್ಕೆ ಒಳಗಾದವರು ಹಾಸನ ಜಿಲ್ಲೆಯ ಬೇಲೂರಿನ ಮೂಲದವರು ಆಗಿದ್ದು, ದಾವಣಗೆರೆಗೆ ವಿವಾಹ ಸಮಾರಂಭಕ್ಕೆ ಬಂದಿದ್ದರು. ಸಮಾರಂಭ ಮುಗಿಸಿಕೊಂಡು ವಾಪಸ್ ಹೋಗುವಾಗ ಈ ದುರಂತ ಸಂಭವಿಸಿದೆ.
ಗಾಯಳುಗಳನ್ನು ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



