ಡಿವಿಜಿಸುದ್ದಿ.ಕಾಂ , ದಾವಣಗೆರೆ: ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋದಲ್ಲಿ ಮಾಡಿದ ಭಾಷಣಕ್ಕೆ ಇವತ್ತಿಗೆ 125 ವರ್ಷಗಳಾಗಿದ್ದರೂ, ಇಂದಿಗೂ ಅದೊಂದು ಚಾರಿತ್ರಿಕ ಘಟನೆಯಾಗಿ ಉಳಿದಿದೆ ಎಂದು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ನಿತ್ಯಸ್ಥಾನಂದ ಅಭಿಪ್ರಾಯಪಟ್ಟರು.
ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾತನಾಡಿದ ಐತಿಹಾಸಿಕ ಭಾಷಣದ ೧೨೫ ನೇ ವರ್ಷಾಚಾರಣೆ ಹಾಗೂ ಸ್ವಾಮಿ ವಿವೇಕಾನಂದರ ಕುರಿತು ವಿವಿಧ ಶಾಲೆಗಳಲ್ಲಿ ಆಯೋಜಿಸಿದ್ದ ಭಾಷಣ ಸ್ಪರ್ಧಿಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣಕ್ಕೆ ೧೨೫ ನೇ ವರ್ಷ ತುಂಬಿರುವುದು ಸಂತೋಷದ ವಿಷಯ. ಈ ದಿನ ಇಡೀ ಭಾರತೀಯರೇ ಹೆಮ್ಮೆ ಪಡುವಂತಹ ದಿನವಾಗಿದೆ. ವಿಶ್ವದಲ್ಲಿರುವ ಎಲ್ಲಾ ಧರ್ಮಗಳ ಸಾರ, ಭೋಧನೆಯನ್ನು ಪ್ರಪಂಚಕ್ಕೆ ತಿಳಿಯಪಡುಸುವ ಉದ್ದೇಶದಿಂದ ವಿಶ್ವ ಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಆ ಬೃಹತ್ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಪ್ರತಿನಿಧಿಯಾಗಿ ಸ್ವಾಮಿ ವಿವೇಕಾನಂದರು ಭಾಗಿಯಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆ ತರುವಂತಹದು ಎಂದರು.
ಸ್ವಾಮಿ ವಿವೇಕಾನಂದರು ಭಾಗಿಯಾದ ಕಾರಣದಿಂದಲೇ ಈ ಸಮ್ಮೇಳನ ಚಾರಿತ್ರಿಕ ಘಟನೆಯಾಗಿ ಉಳಿದಿದೆ. ಅವರ ಭಾಷಣ ಕೇಳುವುದಕ್ಕಾಗಿಯೇ ವಿಶ್ವದಾದ್ಯಂತ ಅಪಾರ ಪ್ರಮಾಣದಲ್ಲಿ ಜನರು ಸೇರಿದ್ದರು. ಅವರ ಪ್ರಭಾವಶಾಲಿ ಉಪನ್ಯಾಸಕ್ಕೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ಇತ್ತೀಚೆಗೆ `ಅಮೆರಿಕಾನ್ ವೇದ’ ಪುಸ್ತಕ ಬಿಡುಗಡೆ ಮಾಡಲಾಯಿತು. ಆ ಪುಸ್ತಕದಲ್ಲಿ ಚಿಕಾಗೋ ವಿಶ್ವ ಧರ್ಮ ಸಮ್ಮೇಳನ ಚಾರಿತ್ರಿಕ ಘಟನೆಯಾಗಿ ಉಳಿಯಲು ವಿವೇಕಾನಂದರ ಭಾಷಣವೇ ಕಾರಣ ಎಂದು ಹೇಳಲಾಗಿದೆ. ಐತಿಹಾಸಿಕ ಭಾಷಣದ ೧೨೫ ನೇ ವರ್ಷದ ಭಾಷಣವನ್ನು ಭಾರತದಲ್ಲಿ ಮಾತ್ರವಲ್ಲದೆ, ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಈ ಕಾರಣಕ್ಕೆ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದ ಅವರನ್ನು ಆದರ್ಶವಾಗಿ ತಗೆದುಕೊಂಡು, ಅವರು ರಚಿಸಿರುವ ಪುಸ್ತಕ ಓದಿ ಜೀವನದಲ್ಲಿ ಯಶಸ್ಸು ಸಾಧಿಸಿ ಎಂದು ಕರೆ ನೀಡಿದರು.
ವ್ಯಕ್ತಿತ್ವ ವಿಕಾಸನ ಪುಸ್ತಕ ಕುರಿತು ಭಾಷಣ ಸ್ಪರ್ಧೆಯಲ್ಲಿ ೮ ಶಾಲೆಯಿಂದ ೮೦೦ ವಿದ್ಯಾರ್ಥಿಗಳು ಭಾಗಿಯಾಗಿದ್ದು, ೨೫ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನ. ಮಾಗನೂರು ಬಸಪ್ಪ ಶಾಲೆ, ಸಪ್ತ ಗಿರಿ ಶಾಲೆ, ಸರ್ವಮಂಗಳ ಶಾಲೆ, ತರಳಬಾಳು ಶಾಲೆ, ಮುರುಘರಾಜೇಂದ್ರ ಶಾಲೆ,ಬಕ್ಕೇಶ್ವರ ಶಾಲೆ, ಗೋಲ್ಡನ್ ಪಬ್ಲಿಕ್ ಶಾಲೆ, ಗುರುಕುಲ ಶಾಲೆ ಹಾಗೂ ವಿಶ್ವ ಭಾರತಿ ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ರಾಮಕೃಷ್ಣ ಮಿಷನ್ನ ಸ್ವಾಮಿ ತ್ಯಾಗೀಶ್ವರನಂದ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205



