ಬೆಂಗಳೂರು: ರಾಜ್ಯದಲ್ಲಿ ವಾಡಿಕೆಗಿಂತ ಮುನ್ನ ಪ್ರವೇಶಿಸಿ ಅಬ್ಬರಿಸಿದ್ದ ನೈಋತ್ಯ ಮಾನ್ಸೂನ್ (monsoon rain) ಈಗ ದುರ್ಬಲಗೊಂಡಿದೆ. ಜೂ.9 ರಿಂದ ದುರ್ಬಲಗೊಂಡ ಮುಂಗಾರು ಚೇತರಿಕೆ ಕಾಣಲಿದೆ. ಜೂ.12ರಿಂದ ಮತ್ತೆ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಅರಬ್ಬಿ ಸಮುದ್ರದಲ್ಲಿ ಮಾನ್ಸೂನ್ ಬಲಗೊಳ್ಳಲು ಪೂರಕ ವಾತಾವರಣ ಉಂಟಾಗುತ್ತಿದೆ. ಸಮುದ್ರ ಮಟ್ಟದಲ್ಲಿ ಮೇಲ್ಮೆ ಸುಳಿಗಾಳಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಜೂ.12ರಿಂದ ಮತ್ತೆ ಮಳೆ ಬಲಗೊಳ್ಳಲಿದೆ. ಈಗಾಗಲೇ ಬಿತ್ತನೆ ಮಾಡಿದ ರೈತರು ಮುಗಿಲು ನೋಡುತ್ತಿದ್ದಾರೆ.
ಬಾಗಲಕೋಟೆ, ಬೆಳಗಾವಿ, ಧಾರವಾಡ, ಕೊಪ್ಪಳ, ರಾಯಚೂರು, ವಿಜಯಪುರ,ಯಾದಗಿರಿ, ಗದಗ, ಬಳ್ಳಾರಿ, ವಿಜಯನಗರದಲ್ಲಿ ಜೂ.12ರಿಂದ ಜೂ.14ರವರೆಗೆ ಜೋರಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿತ್ರದುರ್ಗ, ದಾವಣಗೆರೆಯಲ್ಲಿ ಜೂ.13ರಿಂದ ಎರಡ್ಮೂರು ದಿನ ಜೋರು ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿಯೂ ಜೂ.14ರಂದು ಆರೆಂಜ್ ಅಲರ್ಟ್ ಇದೆ.ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜೂ.8ರಿಂದ ಜೂ.12ರವರೆಗೆ ಒಣಹವೆ ಇರಲಿದೆ.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಸೇರಿ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಕ್ಲಿ ಮುಂದಿನ ನಾಲ್ಕು ದಿನ ಕೆಲವಡೆ ಮಳೆಯಾಗಲಿದೆ.



