ದಾವಣಗೆರೆ: ನಗರೋತ್ಥಾನದಡಿ ಮೂರನೇ ಹಂತ ಪೂರ್ಣಗೊಳಿಸಿ 4 ನೇ ಹಂತದಲ್ಲಿ ಅನುದಾನವನ್ನು ನೀಡಲಾಗಿದ್ದು 15 ನೇ ಹಣಕಾಸು ಯೋಜನೆಯಡಿ ಟೆಂಡರ್ ಪ್ರಕ್ರಿಯೆಯನ್ನೆ ನಡೆಸದ ಅಧಿಕಾರಿಗಳು, ಕಾಮಗಾರಿಗಳನ್ನು ವಿಳಂಬ ಮಾಡಿದ ಅಧಿಕಾರಿಗಳ ಮೇಲೆ ನೋಟಿಸ್ ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗೆ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಸೂಚನೆ ನೀಡಿದರು
ಅಮೃತ ನಗರೋತ್ಥಾನದಡಿ 70 ಕೋಟಿಗೆ ಕ್ರಿಯಾಯೋಜನೆ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಜಿಲ್ಲೆಯ ಹರಿಹರ, ಹೊನ್ನಾಳಿ, ಚನ್ನಗಿರಿ, ಮಲೇಬೆನ್ನೂರು, ನ್ಯಾಮತಿ, ಚನ್ನಗಿರಿ, ಜಗಳೂರು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಗರೋತ್ಥಾನದಡಿ ಮೂರು ಮತ್ತು 4 ನೇ ಹಂತದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಈಗಾಗಲೇ ಮೂರನೇ ಹಂತ ಸಂಪೂರ್ಣ ಮುಗಿದಿದೆ. ನಾಲ್ಕನೇ ಹಂತದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನದಡಿ 70 ಕೋಟಿಗೆ ಕ್ರಿಯಾಯೋಜನೆ ರೂಪಿಸಿ 32.20 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 210 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು.
110 ಕಾಮಗಾರಿಗಳು ಮುಕ್ತಾಯವಾಗಿದ್ದು 71 ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ 13 ಕಾಮಗಾರಿಗಳು ಟೆಂಡರ್ನಲ್ಲಿವೆ, 16 ಕ್ಕೆ ಟೆಂಡರ್ ಕರೆಯಲಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಟೆಂಡರ್ ಹಂತದಲ್ಲಿಯೇ ಅಧಿಕಾರಿಗಳು ಕಾಲಕಳೆಯುತ್ತಿದ್ದು ಇವೆಲ್ಲಾ ಕಾಮಗಾರಿಗಳನ್ನು ಮುಕ್ತಾಯ ಮಾಡುವವರೆಗೆ ಮುಂದಿನ ಹಂತದ ಕಾಮಗಾರಿಗೆ ಅನುದಾನ ನೀಡುವುದಿಲ್ಲ. ಈ ಕಾಮಗಾರಿಗಳನ್ನು ವಿಳಂಬ ಮಾಡಿದ ಅಧಿಕಾರಿಗಳ ಮೇಲೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂದರು.
ಯಾವುದೇ ಕಾಮಗಾರಿ ಸರಿಯಾಗಿ ಅನುಷ್ಟಾನ ಮಾಡುತ್ತಿಲ್ಲ
ಇದೇ ವೇಳೆ ಚನ್ನಗಿರಿ ಶಾಸಕರಾದ ಬಸವರಾಜ್ ವಿ.ಶಿವಗಂಗಾ ಮಾತನಾಡಿ ಚನ್ನಗಿರಿ ಪುರಸಭೆಯಲ್ಲಿ ನಗರೋತ್ಥಾನ ಕಾಮಗಾರಿಗಳು ಸೇರಿದಂತೆ ಯಾವುದೇ ಕಾಮಗಾರಿಗಳನ್ನು ಸರಿಯಾಗಿ ಅನುಷ್ಟಾನ ಮಾಡುತ್ತಿಲ್ಲ, ಮಾಹಿತಿಯನ್ನು ಸಹ ಶಾಸಕರಿಗೆ ನೀಡುವ ಸೌಜನ್ಯತೆ ಹೊಂದಿಲ್ಲ. ಪಟ್ಟಣಕ್ಕೆ ವಿಶೇಷ ಅನುದಾನವನ್ನು ತರಲಾಗಿದ್ದು ಅದರ ಪ್ರಗತಿಯನ್ನು ಅಧಿಕಾರಿಗಳು ಅನುಷ್ಟಾನಕ್ಕೆ ಮುಂದಾಗುತ್ತಿಲ್ಲ ಎಂದಾಗ ಎಲ್ಲಾ ಕಾಮಗಾರಿಗಳ ವಿವರವನ್ನು ಶಾಸಕರ ಗಮನಕ್ಕೆ ತಂದು ಅನುಷ್ಟಾನ ಮಾಡಬೇಕೆಂದು ಸಚಿವರು ಸೂಚನೆ ನೀಡಿದರು.
ಅಧಿಕಾರಿಗಳು ಶಾಸಕರನ್ನು ಭೇಟಿ ಮಾಡಲ್ಲ
ಜಗಳೂರು ಶಾಸಕರಾದ ಬಿ.ದೇವೇಂದ್ರಪ್ಪನವರು ಮಾತನಾಡಿ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಶಾಸಕರನ್ನು ಭೇಟಿ ಮಾಡುವುದಿಲ್ಲ, ಸಾರ್ವಜನಿಕರು ನಮ್ಮ ಹತ್ತಿರ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾರೆ, ಅಧಿಕಾರಿಗಳು ಭೇಟಿ ಮಾಡಿದರೆ ಅವರ ಗಮನಕ್ಕೆ ಹೇಳಲು ಸಾಧ್ಯವಾಗುತ್ತದೆ ಎಂದು ಸಚಿವರಿಗೆ ಸೂಕ್ತ ನಿರ್ದೇಶನ ನೀಡಲು ಪ್ರಸ್ತಾಪಿಸಿದರು.
ದಾವಣಗೆರೆಯಲ್ಲಿ ಇಂದಿರಾ ಕ್ಯಾಂಟೀನ್ ಗೆ 9.55 ಕೋಟಿ ವೆಚ್ಚ
ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ 8 ಸೇರಿದಂತೆ 11 ಇಂದಿರಾ ಕ್ಯಾಂಟೀನ್ಗಳು (Indira canteen) ಇದ್ದು ಇದರೊಂದಿಗೆ ಹೆಚ್ಚುವರಿಯಾಗಿ ಪಾಲಿಕೆಯಲ್ಲಿ 2 ಹಾಗೂ ಹೊನ್ನಾಳಿಯಲ್ಲಿ 1 ಕ್ಯಾಂಟಿನ್ ಪ್ರಾರಂಭಿಸಲಾಗುತ್ತಿದೆ. ಸ್ವಚ್ಚ ಭಾರತ್ ಮಿಷನ್ 1 ರಲ್ಲಿ 71 ಕಾಮಗಾರಿಗಳನ್ನು ತೆಗೆದುಕೊಂಡು 70 ಪೂರ್ಣಗೊಳಿಸಿದ್ದು 1 ಪ್ರಗತಿಯಲ್ಲಿದೆ, ಇದಕ್ಕಾಗಿ ಒಟ್ಟು 9.55 ಕೋಟಿ ವೆಚ್ಚ ಮಾಡಲಾಗಿದೆ. ಎಸ್.ಬಿ.ಎಂ.2 ರಡಿ 37 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ 30 ಪ್ರಗತಿ, 7 ಮುಕ್ತಾಯವಾಗಿವೆ. ಇದರಲ್ಲಿಯೇ ಘನತ್ಯಾಜ್ಯ ನಿರ್ವಹಣೆಯ 7 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು ಸಂಗ್ರಹವಾಗಿರುವ 50656 ಟನ್ ಪಾರಂಪರಿಕ ತ್ಯಾಜ್ಯ ವಿಂಗಡಣೆಗೆ ಕ್ರಮ ವಹಿಸಲಾಗಿದೆ.
15 ನೇ ಹಣಕಾಸು ಯೋಜನೆ ಅನಿರ್ಬಂಧಿತ ನಿಧಿಯಡಿ 2023-24 ರಲ್ಲಿ 3.32 ಕೋಟಿಯಲ್ಲಿ 93 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಇನ್ನೂ ಕೆಲವು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. 2024-25 ರಲ್ಲಿ 3.5 ಕೋಟಿಯಲ್ಲಿ 98 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು 48 ಕಾಮಗಾರಿಗಳು ಮಾತ್ರ ಪ್ರಾರಂಭವಾಗಿವೆ.
ಕಾಮಗಾರಿಗಳ ಪ್ರಗತಿಯಲ್ಲಿ ಕುಂಠಿತವಾಗಿದ್ದು ಇದಕ್ಕೆ ಇಂಜಿನಿಯರ್ಗಳ ಕೊರತೆ ಇದೆ. ಸಾಕಷ್ಟು ಅನುದಾನವಿದ್ದರೂ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗದಿರುವುದನ್ನು ಮನಗಂಡು ಲಬ್ಯವಿರುವ ಇಂಜಿನಿಯರ್ ಗಳಿಂದ ಟೆಂಡರ್ ದಾಖಲೆಗಳನ್ನು ಸಿದ್ದಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರವಾಗಿ ಎಲ್ಲೆಲ್ಲಿ ಕಾಮಗಾರಿ ವಿಳಂಬವಾಗಿದೆ ಎಂಬುದನ್ನು ಪರಿಶೀಲನೆ ನಡೆಸಿ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್ ಅ ಜಿಲ್ಲೆಯಲ್ಲಿನ ಸ್ಥಳೀಯ ಸಂಸ್ಥೆಗಳ ಪ್ರಗತಿ ವಿವರವನ್ನು ಸಭೆಗೆ ತಿಳಿಸಿದರು.