ಡಿವಿಜಿ ಸುದ್ದಿ, ಶಿವಮೊಗ್ಗ: ಕನ್ನಡ ಸಾರಸ್ವತ ಲೋಕಕ್ಕೆ ಸ್ಮರಣೀಯ ಸಾಹಿತಿಯಾಗಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಚಿರಸ್ಥಾಯಿಯಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡರ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಡಾ.ಜಿ.ಎಸ್. ಎಸ್. ಜನ್ಮದಿನ ಪ್ರಯುಕ್ತ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ಆಯೋಜಿಸಿದ್ದ ಕಾವ್ಯಸೌರಭ ಜಿ.ಎಸ್.ಎಸ್ ಪುರಸ್ಕಾರ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ನೆಲದ ಸಾಹಿತಿಗಳನ್ನು ಕಳೆದು ಹೋಗದಂತೆ ಸ್ಮರಿಸುವ, ಸಾಹಿತ್ಯವನ್ನು ನವ ಪೀಳಿಗೆಯು ಅಭ್ಯಸಿಸುವ ಕೆಲಸವನ್ನು ಪ್ರತಿಷ್ಠಾನ ಕೈಗೊಳ್ಳವುದು ಅವಶ್ಯವಾಗಿದೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿ ರಾಷ್ಟ್ರಕವಿಯಾದ ಸರಸ್ವತಿ ಪುತ್ರರಾಗಿದ್ದರು. ಬಡತನದಲ್ಲಿ ಬೆಂದು, ಸಿದ್ದಗಂಗಾ ಮಠದ ಆಶ್ರಯದಲ್ಲಿ ಬೆಳೆದು ರಾಷ್ಟ್ರಖ್ಯಾತಿ ಪಡೆದರು. ಅವರ ಸರಳತೆ, ಉತ್ಸಾಹ ಹಾಗೂ ಜೀವನದ ಕೊನೆಯಲ್ಲಿಯೂ ಅವರು ನೀಡಿದ ಜಾತ್ಯತೀತ ಸಂದೇಶ ಮಾದರಿಯಾದುದು ಎಂದರು.
ವಿಮರ್ಶಕರಾಗಿ,ಸಾಹಿತಿಗಳಾಗಿ, ಕವಿಗಳಾಗಿ,ಆಡಳಿತ ನಿರ್ವಾಹಕರಾಗಿ, ವಿವಿಧ ಸೇವೆಗಳಲ್ಲಿ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಈ ವರ್ಷದ ಜಿ.ಎಸ್.ಎಸ್.ಪುರಸ್ಕಾರವನ್ನು ಕವಿ, ನಾಟಕಕಾರ ಚಂದ್ರಶೇಖರ್ ತಾಳ್ಯರವರಿಗೆ ನೀಡಿ ಅಭಿನಂದಿಸಲಾಯಿತು.

ಸಂಸದ ಬಿ.ವೈ.ರಾಘವೇಂದ್ರ ಅವರು ಡಾ.ಅಶೋಕ್ ಅವರು ರಚಿಸಿರುವ ಡಾ.ಶಿವರುದ್ರಪ್ಪ ಜೀವನ ಮತ್ತು ವ್ಯಕ್ತಿತ್ವ ಪುಸ್ತಕ ಲೋಕಾರ್ಪಣೆಗೊಳಿಸಿದರು.ಸರಕಾರಿ ನೌಕರರ ಸಂಘದ ರಾಜ್ಯಧ್ಯಕ್ಷ ಸಿ.ಎಸ್. ಷಡಕ್ಷರಿ, ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಕಿರಣ್ ದೇಸಾಯಿ, ಈಶ್ವರಪ್ಪ ಉಪಸ್ಥಿತರಿದ್ದರು.



