ದಾವಣಗೆರೆ: ರಾಜ್ಯ ಸರ್ಕಾರ ನಡೆಸಿದ ಜಾತಿ ಗಣತಿ ವರದಿ ಮಂಡನೆ ಮೂಲಕ ವೀರಶೈವ ಲಿಂಗಾಯತ ಸಮಾಜಕ್ಕೆ ನ್ಯಾಯಬದ್ಧವಾಗಿ ಸಿಗುವ ಸೌಲಭ್ಯಕ್ಕೆ ಕತ್ತರಿಹಾಕುವ ಹುನ್ನಾರ ನಡೆದಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಘಟಕದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಮ್ನದೇ ಸರ್ಕಾರದ ವಿರುದ್ಧ ಕಿಡಿಕಾರಿದರು.
2 ಕೋಟಿಗೂ ಅಧಿಕ
ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ 2 ಕೋಟಿಗೂ ಹೆಚ್ಚಿದೆ. ಜಾತಿ ಗಣತಿಯಲ್ಲಿ ಸಮುದಾಯದ ಜನಸಂಖ್ಯೆ ಕೇವಲ 60 ಲಕ್ಷ ಎಂದಷ್ಟೇ ತೋರಿಸಲಾಗಿದೆ. ಜಾತಿ ಗಣತಿ ವರದಿಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆಅನ್ಯಾಯವಾಗಲು ಬಿಡುವುದಿಲ್ಲ ಎಂದು ಗುಡುಗಿದರು.
ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ತಕ್ಷಣವೇ ವರದಿ ಜಾರಿಗೆ ಸಿದ್ಧತೆ
ಒಕ್ಕಲಿಗ ಸಮುದಾಯದ ನಾಯಕರೊಂದಿಗೆ ಮತ್ತೊಂದು ಸುತ್ತಿನ ಸಭೆ ಸೇರಿ ಮುಂದಿನ ನಡೆಯ ಬಗ್ಗೆ ತೀರ್ಮಾನಿಸುತ್ತೇವೆ. ಈ ವೇಳೆಗೆ ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುವ ಘೋಷಣೆ ಮಾಡಿದೆ. ಹೀಗಾಗಿ ರಾಜ್ಯ ಸರ್ಕಾರ ಈಗಾಗಲೇ ನಡೆದಿರುವ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯ( ಜಾತಿ ಗಣತಿ) ವರದಿಯನ್ನು ರಾಜ್ಯ ಸರ್ಕಾರ ಜಾರಿಗೆ ತರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಪಂಚಪೀಠ ಒಂದಾಗಬೇಕು
ವೀರಶೈವ ಸಮುದಾಯದ ಪಂಚಪೀಠಗಳು ಒಗ್ಗೂಡಬೇಕಿದೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಒಲವು ತೋರಿದ್ದಾರೆ. ಐದು ಪೀಠಗಳ ಮಠಾಧೀಶರನ್ನು ಒಗ್ಗೂಡಿಸಲು ದಾವಣಗೆರೆಯಲ್ಲಿ ವೇದಿಕೆ ರೂಪಿಸಲಾಗುವುದು ಎಂದು ಶಿವಶಂಕರಪ್ಪ ಹೇಳಿದರು.
ಒಳಪಂಗಡಗಳ ಒಗ್ಗೂಡಿ
ಮಹಾಸಭಾ ಉಪಾಧ್ಯಕ್ಷ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ,ವೀರಶೈವ ಲಿಂಗಾಯತರಿಗೆ ಬಹುದೊಡ್ಡ ಪರಂಪರೆ ಇದೆ. ಈ ಸಮುದಾಯ ಕವಲು ದಾರಿಯಲ್ಲಿದ್ದು, ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ. ಒಳಪಂಗಡಗಳು ಒಗ್ಗೂಡಿ ನಡೆಯಬೇಕು. ಒಳಪಂಗಡಗಳ ಹೆಸರಿನಲ್ಲಿ ಸಮುದಾಯ ವಿಭಜನೆಯಾದರೆ ಮುಂದಿನ ದಿನಗಳು ಇನ್ನಷ್ಟು ಕಷ್ಟವಾಗಲಿವೆ. ವೀರಶೈವ ಮತ್ತು ಲಿಂಗಾಯತ ಬೇರೆಯಲ್ಲ. ಅಂಗೈಯಲ್ಲಿ ಲಿಂಗ ಹಿಡಿದು ಪೂಜೆ ಮಾಡುವ ಎಲ್ಲರೂ ಲಿಂಗಾಯತರು ಎಂದರು.
ಉಚಿತ ವಸತಿ ನಿಲಯ
ಎಲ್ಲ ಜಿಲ್ಲೆಯಲ್ಲಿ ಸಮುದಾಯ ಭವನ ನಿರ್ಮಾಣವಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಕೇಂದ್ರ ಹಾಗೂ ಬೆಂಗಳೂರಿನಲ್ಲಿ ಉಚಿತ ವಸತಿ ನಿಲಯ ಕಲ್ಪಿಸುವ ನಿಟ್ಟಿನಲ್ಲಿ ಮಹಾಸಭಾ ತೀರ್ಮಾನ ಕೈಗೊಳ್ಳಲಿದೆ ಎಂದರು.
ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಐಗೂರು ಸಿ.ಚಂದ್ರಶೇಖರ್ , ಮಹಾಸಭಾ ಉಪಾಧ್ಯಕ್ಷ ಅಣಬೇರು ರಾಜಣ್ಣ, ಎಸ್.ಎಸ್.ಗಣೇಶ್, ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ.ರೇಣುಕಪ್ರಸನ್ನ, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಶಾಸಕ ಡಿ.ಜಿ.ಶಾಂತನಗೌಡ, ಚಿಂತಕ ಚಟ್ನಳ್ಳಿ ಮಹೇಶ್, ಉದ್ಯಮಿ ಉಮಾಪತಿ, ಎಸ್.ಜಿ.ಉಳುವಯ್ಯ, ಎಸ್.ಕೆ.ವೀರಣ್ಣ, ಎಂ.ಜಿ.ಶಶಿಕಲಾ, ಸಂದೀಪ್ ಅಣಬೇರು, ಜ್ಯೋತಿ ಜೆಂಬಗಿ, ಎಸ್.ಕೆ. ಶಶಿಧರ್ ಹಾಜರಿದ್ದರು.