ಬೆಂಗಳೂರು: ಮುಂದಿನ ಮೂರು ದಿನ ರಾಜ್ಯದ ಕರಾವಳಿ ಜಿಲ್ಲೆಗಳು ಮತ್ತು ಕೆಲ ಜಿಲ್ಲೆಯಲ್ಲಿ ತಾಪಮಾನ (Temperature) ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ವಾತಾವರಣದಲ್ಲಿ ಬಿಸಿ ಗಾಳಿ ಬೀಸಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (ಕೆಎಸ್ಎನ್ಎಂಡಿಸಿ) ತಿಳಿಸಿದೆ.
ಕರಾವಳಿಯ ಕಾರವಾರ ತಾಲ್ಲೂಕಿನ ಸಾವಂತವಾಡಾ ಹೋಬಳಿ ವ್ಯಾಪ್ತಿಯಲ್ಲಿ ಉಷ್ಣಾಂಶ 41.3 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು ರಾಜ್ಯದಲ್ಲೇ ಗರಿಷ್ಠ ತಾಪಮಾನ ಎಂದು ಕೆಎಸ್ಎನ್ಎಂಡಿಸಿ ತಿಳಿಸಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸರಾಸರಿ ಉಷ್ಣಾಂಶ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ಮೀರಲಿದೆ. ಉತ್ತರ ಕನ್ನಡ ಜಿಲ್ಲೆಯ 6, ದಕ್ಷಿಣ ಕನ್ನಡದ 4, ಉಡುಪಿಯ 2 ಹಾಗೂ ರಾಯಚೂರು ಜಿಲ್ಲೆಯ 1 ಕಡೆಯಲ್ಲಿ ಸರಾಸರಿ ಉಷ್ಣಾಂಶ ಸರಾಸರಿ 39 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ಇರಲಿದೆ. ಮುಂದಿನ ಮೂರು ದಿನ ಈ ಪ್ರದೇಶದಲ್ಲಿ ಬಿಸಿ ವಾತಾವರಣ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಉಷ್ಣಾಂಶದ ಪ್ರಮಾಣದಲ್ಲಿ ಅಂತಹ ಏರಿಕೆ ಇರುವುದಿಲ್ಲ. ಚಳಿ ಕಡಿಮೆಯಾಗಿ, ಏಕಾಏಕಿ ಸೆಕೆಯ ವಾತಾವರಣ ಆವರಿಸಿದೆ.



