ದಾವಣಗೆರೆ: ಅಕ್ರಮ ಮರಳು ಸಂಗ್ರಹಣೆ (Illegal sand) ಮೇಲೆ ಪೊಲೀಸರು ದಾಳಿ ಮಾಡಿದ್ದು,ಅಂದಾಜು 90,000 ಬೆಲೆಯ ಸುಮಾರು 60 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆಯಲಾಗಿದೆ.
ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಮತ್ತು ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯಕುಮಾರ್ ಎಂ ಸಂತೋಷ, ಜಿ. ಮಂಜುನಾಥ, ಡಿವೈಎಸ್ಪಿ ಬಸವರಾಜ್ ಬಿ.ಎಸ್ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
ಇಂದು ( ಜ.27) ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಇಂಗಳಗೊಂದಿ ಗ್ರಾಮದ ಬಳಿಯ ತುಂಗಭದ್ರಾ ನದಿ ದಂಡೆಯಲ್ಲಿ ಯಾರೋ ಅಪರಿಚತರು ಮರಳನ್ನು ಅಕ್ರಮವಾಗಿ ಸಾಗಣಿಕೆ ಮಾಡಿ ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಮರಳನ್ನು ಸಂಗ್ರಹಿಸಿಟ್ಟಿದ್ದ ಸ್ಥಳದ ಮೇಲೆ ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ ಒಳಗೊಂಡ ತಂಡವು ದಾಳಿ ಮಾಡಿ ಅಂದಾಜು ಬೆಲೆ 90,000/- ರೂ ಬೆಲೆಯ ಸುಮಾರು 60 ಮೆಟ್ರಿಕ್ ಟನ್ ಮರಳನ್ನು ವಶ ಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ (ತನಿಖೆ) ಶ್ರೀ ಚಿದಾನಂದಪ್ಪ, ಸಿಬ್ಬಂದಿಯವರಾದ ವೆಂಕಟೇಶ್, ನಿಂಗರಾಜು, ಮಲ್ಲಿಕಾರ್ಜುನ, ನಾಗರಾಜ್ ಜೀಪ್ ಚಾಲಕರಾದ ರಾಜಪ್ಪ, ಮುರುಳಿಧರ ತಂಡದಲ್ಲಿದ್ದರು. ಈ ಪತ್ತೆ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.



