ಮೈಲಾರ: ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಫೆಬ್ರವರಿ 14 ರಂದು ಆಯೋಜಿಸಲು ನಿರ್ಧರಿಸಲಾಗಿದ್ದು, ವಿವಿಧ ಇಲಾಖೆಗಳ ಸಮನ್ವಯತೆ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಹೇಳಿದ್ದಾರೆ.
ಮೈಲಾರ ಗ್ರಾಮದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶ್ರೀಮೈಲಾರ ಲಿಂಗೇಶ್ವರ ಜಾತ್ರೆ ಮತ್ತು ಕಾರ್ಣಿಕೋತ್ಸವದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೈಲಾರ ಜಾತ್ರೆಯು ಫೆಬ್ರವರಿ 4 ರಿಂದ ಆರಂಭವಾಗಿ 15 ವರೆಗೆ ನಡೆಯಲಿದ್ದು ಫೆಬ್ರವರಿ 14 ರಂದು ಸಂಜೆ 5.30 ಕ್ಕೆ ಡೆಂಕನ ಮರಡಿಯಲ್ಲಿ ಕಾರ್ಣಿಕೋತ್ಸವ ನಡೆಯಲಿದೆ.
ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿಟ್ಟಿನಲ್ಲಿ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ವಿದ್ಯುತ್ ದೀಪ, ಸಾರಿಗೆ ವ್ಯವಸ್ಥೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಆರೋಗ್ಯ ಇಲಾಖೆಯಿಂದ ತಾತ್ಕಾಲಿ ಕಟೆಂಟ್ ವ್ಯವಸ್ಥೆಯಡಿ ಉಚಿತ ಆರೋಗ್ಯ ಸೇವೆ ಜತೆಗೆ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ.
ಸಿಸಿ ಟಿವಿ ಅಳವಡಿಕೆ, ವಿದ್ಯುತ್ ದೀಪಗಳನ್ನು ನಿಯಮಾನುಸಾರ ವ್ಯವಸ್ಥೆ ನೀಡಬೇಕು. ಡೆಂಕನಮರಡಿ ಬಳಿ ಎಲ್ಇಡಿ ಲೈಟ್ಸ್ ಅಳವಡಿಸಿ ಕತ್ತಲಿರದಂತೆ ನಿಗಾ ವಹಿಸಬೇಕು. ಇಡೀ ಜಾತ್ರೆಯಲ್ಲಿ ಅಧಿಕಾರಿಗಳು ವೈಯಕ್ತಿಕ ಹಿತಾಸಕ್ತಿ ಪ್ರದರ್ಶಿಸಿದರೇ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು.ಸಣ್ಣ ಅವಘಡ ನಡೆಯದಂತೆ ಇಚ್ಛಾಶಕ್ತಿ ಕರ್ತವ್ಯ ನಿರ್ವಹಿಸುವಂತೆ ಹಾಗೂ ನಾಲ್ಕು ದಿನಗಳ ಮುಂಚಿತವಾಗಿ ಮದ್ಯಮಾರಾಟ ನಿಷೇಧಿಸಲು ಸೂಚಿಸಿದರು.
ಹೂವಿನಹಡಗಲಿ ಶಾಸಕರಾದ ಕೃಷ್ಣನಾಯ್ಕ ಮಾತನಾಡಿ ಸಾರಿಗೆ ಇಲಾಖೆಯಿಂದ ಎಲ್ಲಾ ಭಾಗದ ಭಕ್ತರು ಆಗಮಿಸಲು ಹೆಚ್ಚಿನ ಬಸ್ಗಳನ್ನು ನಿಯೋಜಿಸಬೇಕು. ಹರಿಹರ, ದಾವಣಗೆರೆ, ಹಾವೇರಿ, ಹಡಗಲಿ, ಘಟಕಗಳಿಂದ ಬಸ್ ನೀಡಲು ವ್ಯವಸ್ಥೆ ಮಾಡಿಕೊಳ್ಳಬೇಕು.
ರಾತ್ರಿ ವೇಳೆಯಲ್ಲಿ ಭಕ್ತರ ಬೇಡಿಕೆಯಂತೆ ಬಸ್ ಸಂಚಾರ ವ್ಯವಸ್ಥೆ ನೀಡಬೇಕು. ಸಮಯ ನಿಗಧಿಪಡಿಸದಂತೆ ನಿರಂತರ ಸೇವೆ ಸಾರಿಗೆ ಇಲಾಖೆ ನೀಡಲಿ.ಮೈಲಾರಕ್ಕೆ ಸಂಪರ್ಕಕಲ್ಪಿಸುವ ಎಲ್ಲಾ ರಸ್ತೆಗಳ ದುರಸ್ತಿ ಕಾರ್ಯ ಶೀಘ್ರದಲ್ಲೇ ಆರಂಭಿಸಲಾಗುವುದು.ಜಾತ್ರೆಯ ವೇಳೆಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮೈಲಾರ ಡೆಂಕನಮರಡಿ ರಸ್ತೆ ತಾತ್ಕಾಲಿಕವಾಗಿ ಆಗಲೀಕರಣಗೊಳಿಸಿ ಭಕ್ತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ನೀಡಲು ಸೂಚಿಸಿದರು.ಅಗ್ನಿಶಾಮಕ ದಳದಿಂದ ಕನಿಷ್ಠ ಎರಡು ವಾಹನಗಳು ತುರ್ತು ಸೇವೆ ನೀಡಲು ಸಿದ್ದವಿರಲಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ನೊಂಗ್ಜಾಯ್ ಮಹ್ಮದ ಅಲಿ, ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯಒಡೆಯರ್, ತಹಶೀಲ್ದಾರ ಸಂತೋಷಕುಮಾರ್, ಡಿವೈಎಸ್ಪಿ ವೆಂಕಟಪ್ಪ ನಾಯಕ, ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಸಿಪಿಐ ದೀಪಕ್ ಭೂಸರೆಡ್ಡಿ, ಗ್ರಾಪಂ ಅಧ್ಯಕ್ಷೆ ಜಾನಕಮ್ಮ ಇತರರಿದ್ದರು.



