ದಾವಣಗೆರೆ: ಅಡಿಕೆ ಬೆಳೆಗೆ ಚುಕ್ಕೆ ರೋಗ ಹಾಗೂ ಇತರೆ ರೋಗದಿಂದ ಬೆಳೆಯ ಇಳುವರಿ ಕುಂಠಿತವಾಗಿದ್ದು, ರಾಜ್ಯ ಸರ್ಕಾರ ರೋಗ ನಿವಾರಣೆಗೆ 50 ಲಕ್ಷ ಮಂಜೂರು ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿನ ಚಳಿಗಾಲದ ಅಧಿವೇಶನದಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದರು. ಎಲೆ ಚುಕ್ಕೆ ರೋಗದಿಂದ ರಾಜ್ಯದಲ್ಲಿ ಸುಮಾರು 53,977 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಅಡಿಕೆ ಬೆಳೆಗೆ ಹಾನಿಯಾಗಿದೆ. ರೋಗ ಹರಡದಂತೆ ನಿಯಂತ್ರಣ ಮಾಡಲು ಸರ್ಕಾರ ಶಿವಮೊಗ್ಗ ತೋಟಗಾರಿಕೆ ವಿಶ್ವ ವಿದ್ಯಾಲಯದ ತಜ್ಞರ ನೇತೃತ್ವದ ತಂಡ ರಚನೆ ಮಾಡಿದ್ದು, ಸಂಶೋಧನೆಗೆ ರೂ.50 ಲಕ್ಷ ಅನುದಾನ ಒದಗಿಸಿದೆ ಎಂದರು.
ಅಡಿಕೆ ಬೆಳೆ ರೋಗ ತಡೆ ಸೇರಿದಂತೆ ಬೆಳೆಯ ರಕ್ಷಣೆಗೆ, ಸಬ್ಸಿಡಿಗೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಅವರ ಮೂಲಕ ಮನವಿ ಮಾಡಲಾಗಿದ್ದು ಎರಡು ಹಂತದಲ್ಲಿ 225 ಕೋಟಿ ಅನುದಾನ ಬರಲಿದೆ. ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಬದ್ದವಾಗಿದೆ. ಬದಲಾದ ಹವಾಮಾನ ವೈಪರೀತ್ಯಗಳಿಂದ ಅಡಿಕೆ ಬೆಳೆಗೆ ಚುಕ್ಕೆ ರೋಗ ಹಾಗೂ ಇತರೆ ಭಾದೆ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಹಲವಾರು ಸಭೆಗಳನ್ನು ಸಂಬಂಧ ಪಟ್ಟವರೊಂದಿಗೆ ಮಾಡಲಾಗಿದೆ.
ಸಂಪ್ರದಾಯಕವಾಗಿ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಅಡಿಕೆ ಬೆಳೆ ಕಟಾವು ಹಾಗೂ ಸಿಂಪರಣೆಗಾಗಿ ದೋಟಿ ಖರೀದಿಸಲು ಕೃಷಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಶೇ.40 ರಷ್ಟು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತಿದೆ.
ಈ ಯೋಜನೆಯಡಿ 2023-24ನೇ ಸಾಲಿಗೆ 1,201 ಫಲಾನುಭವಿಗಳಿಗೆ ರೂ.3.66 ಕೋಟಿ ಸಹಾಯಧನ ನೀಡಲಾಗಿದೆ. ರೋಗದ ನಿಯಂತ್ರಣ ಕುರಿತು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವ ವಿದ್ಯಾಲಯದ ತಜ್ಞರ ಸಹಯೋಗದಲ್ಲಿ ರೈತರಿಗೆ ತರಬೇತಿ, ಪ್ರಾತ್ಯಕ್ಷತೆಗಳನ್ನು ನೀಡಿ, ಮಾಹಿತಿ ಹಾಗೂ ಪ್ರಚಾರ ಕಾರ್ಯ ಮಾಡಲಾಗುತ್ತಿದೆ. ರೋಗದ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ ನೇಮಿಸಿರುವ ವೈಜ್ಞಾನಿಕ ತಂಡ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ತಾಂತ್ರಿಕ ಸಲಹೆಗಳನ್ನು ನೀಡಿದೆ.



