ದಾವಣಗೆರೆ: ಆಸ್ತಿ ಹಾಗೂ ಜಾಗದ ವಿಚಾರವಾಗಿ 1 ಲಕ್ಷಕ್ಕೆ ಸುಪಾರಿ ನೀಡಿ ಚಿಕ್ಕಪ್ಪನನ್ನೇ ಕೊಲೆ ಮಾಡಿಸಿದ ಆರೋಪಿಗಳು ಮತ್ತು ಕೊಲೆಗಾರನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರು ಭದ್ರಾ ಉಪ ನಾಲೆಯಲ್ಲಿ ನ.22ರಂದು ಅಪರಿಚಿತ ವ್ಯಕ್ತಿಯ ಶವ ಅನುಮಾನಸ್ಪಾದ ರೀತಿಯಲ್ಲಿ ದೊರೆತಿದ್ದು, ಮೃತ ದೇಹವನ್ನು ದಾವಣಗೆರೆ ತಾಲ್ಲೂಕು ಗೋಪನಾಳ್ ಗ್ರಾಮದ ಬೋರ್ ಪಾಯಿಂಟ್ ಮಾಡುವ ಸಿದ್ದಲಿಂಗಪ್ಪ (55) ಗುರುತಿಸಲಾಗಿದೆ. ಮೃತನ ಸೊಸೆ ದೊಡ್ಡಮ್ಮ , ಮಾವ ಸಿದ್ದಲಿಂಗಪ್ಪ ಕೊಲೆಯಾಗಿರುವ ಬಗ್ಗೆ ಅನುಮಾನವನ್ನು ವ್ಯಕ್ತ ಪಡಿಸಿ ದೂರು ನೀಡಿದ್ದರು. ಈ ದೂರಿನ ಆಧಾರದೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣವನ್ನು ಪತ್ತೆ ಮಾಡಲು ಎಸ್ಪಿ ಉಮಾ ಪ್ರಶಾಂತ್ ಮತ್ತು ಎಎಸ್ಪಿ ಸಂತೋಷ ವಿಜಯಕುಮಾರ್ ಮತ್ತು ಮಂಜುನಾಥ ಮಾರ್ಗದರ್ಶನದಲ್ಲಿ, ಚನ್ನಗಿರಿ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಸಿಬ್ಬಂದಿ ಒಳಗೊಂಡ ತಂಡಗಳನ್ನು ರಚನೆ ಮಾಡಲಾಗಿತ್ತು. ಈ ತಂಡವು ನ.23 ರಂದು ಪ್ರಕರಣದ ಎ1 ಆರೋಪಿ ಸತೀಶ ಗೋಪನಾಳ್ ಗ್ರಾಮ, ದಾವಣಗೆರೆ ತಾಲ್ಲೂಕು ಇವನನ್ನು ಮತ್ತು ನ.24 ರಂದು ಪ್ರಕರಣದ ಎ2 ಆರೋಪಿ ಪ್ರಭು @ ಮಾಸ್ತಿ ತಂದೆ ರಾಜಪ್ಪ, ವಾಸ:- ಲಿಂಗದಹಳ್ಳಿ ಗ್ರಾಮ, ದಾವಣಗೆರೆ ತಾಲ್ಲೂಕು ಮತ್ತು ಎ3 ಆರೋಪಿ ಪ್ರಶಾಂತ್ ನಾಯ್ಕ @ ಪಿಲ್ಲಿ ತಂದೆ ಶಂಕರ್ ನಾಯ್ಕ ವಾಸ:- ಆಶಾ ವೈನ್ಸ್ ಮುಂಭಾಗ, ನಿಟ್ಟುವಳ್ಳಿ ದಾವಣಗೆರೆ ನಗರ ಇವರನ್ನು ಪತ್ತೆ ಮಡಲಾಗಿದೆ. ನ.30ರಂದು ಪ್ರಕರಣದ ಎ4 ಆರೋಪಿ ಸುಜಾತ ಗೋಪನಾಳ್ ಗ್ರಾಮ, ದಾವಣಗೆರೆ ತಾಲ್ಲೂಕು, ಎ5 ಆರೋಪಿ ಶಿವಮೂರ್ತೆಪ್ಪ ಗೋಪನಾಳ್ ತಾಲ್ಲೂಕು ಇವರನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದ್ದು, ಎ1,ಎ4,ಎ5 ಆರೋಪಿತರು ಆಸ್ತಿ ಹಾಗೂ ಜಾಗದ ವಿಚಾರವಾಗಿ ಸಿದ್ದಲಿಂಗಪ್ಪನನ್ನು ಕೊಲೆ ಮಾಡಿಸಲು ಸಂಚು ರೂಪಿಸಿದ್ದರು. ಎ2, ಎ3 ಆರೋಪಿಗಳು ಸಿದ್ದಲಿಂಗಪ್ಪನನ್ನು ಕೊಲೆ ಮಾಡಲು 01 ಲಕ್ಷ ರೂಪಾಯಿಗೆ ಸುಪಾರಿ ಪಡೆದಿದ್ದರು.
ನ. 21ರಂದು ಸಂಜೆ ಸಮಯದಲ್ಲಿ ಸಿದ್ದಲಿಂಗಪ್ಪನ್ನು ಬೋರ್ ಪಾಯಿಂಟ್ ಮಾಡಿಸಬೇಕಾಗಿದೆ ಎಂದು ತೊಗಲೇರಿ ಕ್ರಾಸ್ ನಿಂದ ಆಟೋದಲ್ಲಿ ಚನ್ನಗಿರಿ ತಾಲ್ಲೂಕು ಹೊನ್ನೆಬಾಗಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಪೂರ್ವ ನಿಯೋಜನೆಯಂತೆ ಸದರಿ ಸಿದ್ದಲಿಂಗಪ್ಪನ್ನು ಆರೋಪಿಗಳು ಟವೆಲ್ ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ಸಿದ್ದಲಿಂಗಪ್ಪ ಶವವನ್ನು ನಲ್ಲೂರು ಸಮೀಪದ ಭದ್ರಾ ಚಾನಲ್ ಗೆ ತಂದು ಶವಕ್ಕೆ ಕಲ್ಲು ಕಟ್ಟಿ ನೀರಿಗೆ ಹಾಕಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.



