ಚಿತ್ರದುರ್ಗ: ಬಸ್ ನಲ್ಲಿ ಪಾರ್ಸಲ್ ಗಾಗಿ ಪಾರಿವಾಳ ತುಂಬಿದ್ದ ಬಾಕ್ಸ್ ಅನ್ನು ಚಾಲಕನ ಪಕ್ಕದಲ್ಲಿಟ್ಟಿದ್ದರು. ಇದ್ದಕ್ಕಿದ್ದಂತೆ ಪಾರಿವಾಳಗಳು ಹೊರಗೆ ಬಂದು ಹಾರಲು ಪ್ರಯತ್ನಿಸಿವೆ. ಅವುಗಳನ್ನು ಡ್ರೈವರ್ ಹಿಡಿಯಲು ಹೋದಾಗ ಬಸ್ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಸಮೀಪ ನಡೆದಿದೆ.
ಚಲಿಸುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಇಂದು (ನ.10) ಬೆಳಿಗ್ಗೆ 9 ಗಂಟೆ ಸುಮಾರಿಗೆ ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿ 150ರ ಬುಡ್ನಹಟ್ಟಿ ಬಳಿಯ ಬಾಹುಬಲಿ ಫ್ಯಾಮಿಲಿ ಡಾಬಾ ಸಮೀಪ ನಡೆದಿದೆ. ಬಸ್ಸಿನಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
ಪಾರಿವಾಳ ತುಂಬಿದ್ದ ಬಾಕ್ಸ್ ಅನ್ನು ಚಾಲಕನ ಪಕ್ಕದಲ್ಲಿಟ್ಟಿದ್ದರು. ಇದ್ದಕ್ಕಿದ್ದಂತೆ ಪಾರಿವಾಳಗಳು ಹೊರಗೆ ಬರಲು ಪ್ರಯತ್ನಿಸಿವೆ. ಅವುಗಳನ್ನು ಹಿಡಿಯಲು ಹೋದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯಲ್ಲಿ ಹಲವಾರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊಳಕಾಲ್ಮೂರಿನಿಂದ ಚಳ್ಳಕೆರೆ ಕಡೆಗೆ ಬರುವಾಗ ಈ ಘಟನೆ ನಡೆದಿದೆ. ಮಂಜುನಾಥ ಖಾಸಗಿ ಬಸ್ ನಲ್ಲಿ ಈ ಘಟನೆ ನಡೆದದೆ. ಬಸ್ ಚಾಲಕನ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



