ದಾವಣಗೆರೆ: ದೀಪಾವಳಿ ಹಬ್ಬಕ್ಕೂ ಮುನ್ನ ದಿನ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಟ್ರ್ಯಾಕ್ಟರ್ ತೊಳೆಯುವಾಗ ತೇಲಿ ಹೋದ ಬಕೆಟ್ ಹಿಡಿಯಲು ಹೋದ ಯುವಕ ಸಹಿತ ಇಬ್ಬರು ನೀರು ಪಾಲಾದ ಘಟನೆ ನಡೆದಿದೆ.
ಈ ಘಟನೆ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ತುಂಗಾಭದ್ರಾ ನದಿಯಲ್ಲಿ ಪಾತ್ರದಲ್ಲಿ ನಡೆದಿದೆ. ನಾಳೆ (ನ.1) ದೀಪಾವಳಿ ಅಮವಾಸ್ಯೆ ಇರುವುದರಿಂದ ಇಂದು ಟ್ರ್ಯಾಕ್ಟರ್ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಗುತ್ತೂರು ಗ್ರಾಮದ ಹನುಮಂತಪ್ಪ(56), ಪ್ರಶಾಂತ್(16) ಮೃತಪಟ್ಟವರು. ಈ ದುರಂತ ಇಡೀ ಗುತ್ತೂರು ಗ್ರಾಮದಲ್ಲಿ ಸೂತಕ ವಾತಾವರಣ ನಿರ್ಮಾಣವಾಗಿದೆ.
ಟ್ರ್ಯಾಕ್ಟರ್ ತೊಳೆಯುವಾಗ ನೀರಿನಲ್ಲಿ ತೇಲಿ ಹೋಗುತ್ತಿದ್ದ ಬಕೆಟ್ ಹಿಡಿಯಲು ಹೋಗಿ ಮರಳು ಗುಂಡಿಗೆ ಬಿದ್ದ ಪ್ರಶಾಂತ್ ಬಿದ್ದಿದ್ದಾನೆ. ರಕ್ಷಿಸಲು ಹೋದ ಹನುಮಂತಪ್ಪನೂ ನೀರಿನಲ್ಲಿ ಮುಳುಗಿದ್ದಾರೆ. ಇಬ್ಬರಿಗೂ ಈಜು ಬಾರದ ಕಾರಣ ಸಾವು ಸಂಭವಿಸಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ, ಪೊಲೀಸರು ಶವ ಹೊರ ತೆಗೆದಿದ್ದಾರೆ.ಕುಟುಂಬದರು ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



