ಡಿವಿಜಿ ಸುದ್ದಿ, ಹಳೇಬೀಡು: ಪಿಎಲ್ ಡಿ, ಸಹಕಾರಿ, ಡಿಸಿಸಿ ಬ್ಯಾಂಕ್ ಗಳಲ್ಲಿ ರೈತರು ತಗೆದುಕೊಂಡ ಸಾಲದ ಮೇಲಿನ 500 ಕೋಟಿಯಷ್ಟು ಬಡ್ಡಿ, ಸುಸ್ತಿ ಬಡ್ಡಿ ಮನ್ನಾ ಮಾಡಲು ಈ ಬಾರಿ ಬಜೆಟ್ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಸಿರಿಗೆರೆಯ ತರಳಬಾಳು ಬೃಹನ್ಮಠದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಉದ್ದೇಶಕ್ಕಾಗಿ ರೈತರು ಧೀರ್ಘ ಮತ್ತು ಮಧ್ಯಮ ಅವಧಿ ವರೆಗೆ ಸಾಲ ತಗೆದುಕೊಂಡಿದ್ದಾರೆ. ಇಂತಹ ರೈತರು ಮಾರ್ಚ್ ಒಳಗೆ ಸಾಲ ಕಟ್ಟಲು ಮುಂದೆ ಬಂದರೆ ಸಾಲದ ಮೇಲಿನ ಬಡ್ಡಿ, ಸುಸ್ತಿ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲಾಗುವುದು. ಇದರಲ್ಲದೆ ಈ ಬಾರಿ ಬಜೆಟ್ ನಲ್ಲಿ ರೈತರ ಅಭಿವೃದ್ಧಿಗಾಗಿ 2 ಸಾವಿರ ಕೋಟಿ ರೂಪಾಯಿ ಆವೃತ್ತಿ ನಿಧಿಯನ್ನು ಮೀಸಲಿಡಲಾಗುವುದು ಎಂದರು.
ರಣಘಟ್ಟ ಯೋಜನೆಗೆ ಅನುಮೋದನೆಗೆ ಕ್ರಮ
ಹಳೇಬೀಡಿನ ಭಾಗದ ರೈತರಿಗೆ ಅನುಕೂಲವಾಗುವ ರಣಘಟ್ಟ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕವಾಗಿ ಅನುಮೋದನೆ ನೀಡಲಾಗುವುದು. ಮುಂಬರುವ ಬಜೆಟ್ ನಲ್ಲಿ ಅದಕ್ಕೆ ಬೇಕಾದ ಅನುದಾನ ಒದಗಿಸಲಾಗುವುದು. ಹಾಗೆಯೇ ಎತ್ತಿನ ಹೊಳೆ ಯೋಜನೆಯಲ್ಲಿ ಈ ಭಾಗದ ಕೆಲವು ಪ್ರದೇಶಗಳು ಬಿಟ್ಟು ಹೋಗಿವೆ ಎಂಬದನ್ನು ಗಮನಕ್ಕೆ ತಂದಿದ್ದಾರೆ ಪರಿಶೀಲಿಸಿ ಸೇರಿಸುವ ಪ್ರಯತ್ನ ಮಾಡುತ್ತೇನೆ. ಇನ್ನು ಹಳೇಬೀಡನ್ನು ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯ್ತಿ ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿದರು.



