ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿ ನೂತನವಾಗಿ ನಿರ್ಮಾಣಗೊಂಡಿರುವ ಹೈಟೆಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಲೋಕಾರ್ಪಣೆಗೊಂಡು ಐದು ತಿಂಗಳ ಬಳಿಕ ಕಾರ್ಯಾರಂಭವಾಗಲಿದೆ. ಸೆ.22ರಿಂದ ಅಧಿಕೃತವಾಗಿ ಬಸ್ ಗಳ ನೂತನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ ಎಂದು ಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ್ ತಿಳಿಸಿದ್ದಾರೆ.
ಪಿ.ಬಿ ರಸ್ತೆಯಲ್ಲಿರುವ ಈ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ 109 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 6 ಎಕರೆ 7 ಗುಂಟೆ ಪ್ರದೇಶದಲ್ಲಿರುವ ನಿಲ್ದಾಣ, 45 ಬಸ್ ನಿಲುಗಡೆ ಮಾಡುವ ವ್ಯವಸ್ಥೆಯನ್ನು ಹೊಂದಿದೆ. ಇದು ಮಾರ್ಚ್ 9ರಂದು ಲೋಕಾರ್ಪಣೆಗೊಂಡಿತ್ತು. ಆದರೆ, ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿರಲಿಲ್ಲ.
2021ರ ಜನವರಿಯಿಂದ ಬಸ್ ನಿಲ್ದಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಕಾಮಗಾರಿಯನ್ನು ಪೂರ್ಣಗೊಳಿಸಲು ಎರಡು ವರ್ಷಗಳ ಕಾಲಮಿತಿ ನಿಗದಿಪಡಿಸಲಾಗಿತ್ತು. ನಿಲ್ದಾಣ ನಿರ್ಮಾಣವಾಗಿ ಸೇವೆಗೆ ಲಭ್ಯವಾಗಲು ಮೂರೂವರೆ ವರ್ಷ ತೆಗೆದುಕೊಂಡಿದೆ. ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡಿದ್ದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ವಾರದಲ್ಲಿ ಸೇವೆ ಸ್ಥಗಿತಗೊಳಿಸಲಿದೆ.
ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕ ವಿಳಂಬವಾಗಿದ್ದರಿಂದ ಸೇವೆಗೆ ಲಭ್ಯವಾಗಿರಲಿಲ್ಲ. ಈಗ ಎಲ್ಲ ಸೌಲಭ್ಯ ಹೊಂದಿದೆ. ವಾಹನ ನಿಲುಗಡೆಗೂ ಹೊಸ ಟೆಂಡರ್ ಅಂತಿಮಗೊಂಡಿದೆ. ಸೆ. 22 ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜನ್ಮ ದಿನ ಇದೆ. ಇದೇ ದಿನ ನೂತನ ಬಸ್ ನಿಲ್ದಾಣ ಕಾರ್ಯಾರಂಭವಾಗಲಿದೆ.