ಡಿವಿಜಿ ಸುದ್ದಿ, ಹಳೇಬೀಡು: ಈ ಬಾರಿಯ ಬಜೆಟ್ ನಲ್ಲಿ ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.
ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ರಾಜ್ಯದ ಸಮಗ್ರ ನೀರಾವರಿಯನ್ನು ಒಂದೇ ಸಲ ರೂಪಿಸಿ ಎಂದು ನಾವು ಹೇಳುತ್ತಿಲ್ಲ. ಪ್ರತಿ ವರ್ಷ ಒಂದೊಂದು ಯೋಜನೆಗೆ ಹಣ ಮೀಸಲಿಟ್ಟರೆ, 10 ವರ್ಷದಲ್ಲಿ ಇಡೀ ರಾಜ್ಯವೇ ಸಮೃದ್ಧ ರಾಜ್ಯವಾಗಲಿದೆ. ರೈತರಿಗೆ ನೀರೊಂದನ್ನು ಕೊಡಿ, ರೈತರೇ ಉತ್ತಮ ರೀತಿಯಲ್ಲಿ ಬೆಳೆದು ಸರ್ಕಾರಕ್ಕೆ ಸಾಲ ಕೊಡುವ ಹಂತಕ್ಕೆ ಬೆಳೆಯುತ್ತಾರೆ ಎಂದು ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡರು.

ಸಿರಿಗೆರೆ, ಭರಮಸಾಗರ ಸುತ್ತಮುತ್ತ ನೀರಿಗಾಗಿ ಪರದಾಟ ನಡೆಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭರಮಸಾಗರ ಮತ್ತು ಸಿರಿಗೆರೆ ಸುತ್ತಮುತ್ತ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದರು. ಇದರ ಪರಿಣಾಮ 70 ರಿಂದ 80 ಹಳ್ಳಿಗಳ ಜನರು ಈಗಲೂ ಯಡಿಯೂರಪ್ಪ ನೆನೆಸಿಕೊಳ್ಳುತ್ತಾರೆ. ಕೆರೆಗಳು ಬತ್ತಿ ಹೋದರೆ ಚಿಪ್ಪುಗಳಿಗೆ ಹುಡುಕಾಟ, ಸಮುದ್ರ ಬತ್ತಿದರೆ ಮುತ್ತು-ರತ್ನ ಹುಡುಕಾಟ ನಡೆಯುತ್ತಿತ್ತು ಎಂದು ಹಿಂದೆ ಹೇಳುತ್ತಿದ್ದರು. ಆದರೆ, ಈಗ ಕೆರೆ ಬತ್ತಿದ್ದರೆ, ಒತ್ತುವರಿ ಮಾಡಿ ಸೈಟ್ ಮಾಡಲು ಕಾಯುವವರು ಹೆಚ್ಚಾಗಿದ್ದಾರೆ. ಹೀಗಾಗಿ ಜನರ ಮೂಲ ಅವಶ್ಯಗಳಲ್ಲಿ ನೀರು ಕೂಡ ಒಂದು. ಅದನ್ನು ಸಂರಕ್ಷಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.
ಜಗಳೂರಿನ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ 1 ಸಾವಿರ 200 ಕೋಟಿಯಲ್ಲಿ ಮೀಸಲಿಡಲಾಗಿತ್ತು. ಆದರೆ, ಸರ್ಕಾರ ಮುಂಜೂರಾತಿಯಲ್ಲಿ ಕೇಲವ 250 ಕೋಟಿ ಮಾತ್ರ ಮೀಸಲಿಟ್ಟು ಅನುಮೋದನೆ ನೀಡಿತ್ತು. ಆಗ, ಸಚಿವರಾದ ಬಸವರಾಜ್ ಬೊಮ್ಮಾಯಿ, ಸಿಟಿ ರವಿ, ಗೋವಿಂದ್ ಕಾರಜೋಳ, ಸಿಸಿ ಪಾಟೀಲ್ ಅವರ ಸಹಕಾರದಿಂದ ಮುಖ್ಯಮಂತ್ರಿಯ ಮೇಲೆ ಒತ್ತಡ ತಂದು ಸಂಪೂರ್ಣ 1 ಸಾವಿರದ 200 ಕೋಟಿಯನ್ನು ಮಂಜೂರು ಮಾಡಿಸಿಕೊಟ್ಟರು. ಈ ಯೋಜನೆಯನ್ನು ಮಂಜೂರು ಮಾಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು ಎಂದರು.
ರಣಘಟ್ಟ ಯೋಜನೆ ಅಧಿಕೃತ ಆದೇಶವಾಗಲಿ
ತುಂಗಭದ್ರಾ ನಂದಿಯಿಂದ ಪ್ರತಿ ವರ್ಷ 176 ಟಿಎಂಸಿ ನೀರು ಹರಿದು ಹೋಗುತ್ತದೆ. ಆದರೆ,ನಾವು ಉಪಯೋಗಿಸಿಕೊಳ್ಳುತ್ತಿರುವುದು ಕೇಲವ 1 ಟಿಎಂಸಿ ನೀರನ್ನು ಮಾತ್ರ. ಇನ್ನುಳಿದ ನೀರು ಅನವಶ್ಯಕವಾಗಿ ಸಮುದ್ರ ಸೇರುತ್ತಿದೆ. ಹೀಗಾಗಿ ಇದರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸವಾಗಬೇಕು. ಇನ್ನು ಹಳೇಬೀಡಿನ ರಣಘಟ್ಟ 127 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗೆ ಸರ್ಕಾರ ಅನುಮೋದನೆ ನೀಡಬೇಕು. ಮುಂಬರುವ ಬಜೆಟ್ ನಲ್ಲಿ ಅಧಿಕೃತ ಆದೇಶವಾಗಬೇಕು. ಈ ಮೂಲಕ ಭಾಗದ ರೈತರು ನೆಮ್ಮದಿಯಿಂದ ಜೀವನ ಮಾಡು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಹುತಾತ್ಮ ಯೋಧರ ವಿಶೇಷ ನಿಧಿ ಸ್ಥಾಪನೆ
ಈ ವರ್ಷ ಯುದ್ಧದಲ್ಲಿ ಹುತಾತ್ಮರಾದ 11 ಯೋಧರ ಕುಟುಂಗಳಿಗೆ ತಲಾ 50 ಸಾವಿರ ರೂಪಾಯಿ ನೀಡಿ ಸನ್ಮಾನಿಸಿದ್ದೇವೆ. ಮುಂದಿನ ವರ್ಷದಿಂದ ಹುತಾತ್ಮ ಯೋಧ ಕುಟುಂಬಗಳನ್ನು ಸನ್ಮಾನಿಸುವ ಕೆಲಸವನ್ನು ತರಳಬಾಳು ಮಠ ಮುಂದುವರಿಸಿಕೊಂಡು ಹೋಗುವ ಗುರಿ ಹೊಂದಿದೆ. ಇದಕ್ಕಾಗಿ ವಿಶೇಷ ನಿಧಿ ಸ್ಥಾಪಿಸಲು ಶಿಷ್ಯರು ಉತ್ಸಾಹ ತೋರಿದ್ದಾರೆ. ಹೀಗಾಗಿ ಮುಂದಿನ ತರಳಬಾಳು ಹುಣ್ಣಿಯಿಂದ ಯೋಧರಿಗೆ ಸನ್ಮಾನಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದರು.



