ದಾವಣಗೆರೆ: ಮನೆಯ ಹಿಂಭಾಗದಲ್ಲಿ ಕಾಣಿಸಿಕೊಂಡ ಭಾರೀ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಉರಗ ತಜ್ಞರು ಸುರಕ್ಷಿತವಾಗಿ ಹಿಡಿದು, ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟ ಘಟನೆ ಹೊನ್ನಾಳಿ ತಾಲೂಕಿನಲ್ಲಿ ನಡೆದಿದೆ.
ಹೊನ್ನಾಳಿ ತಾಲೂಕಿನ ನರಿಗಿನಕೆರೆ ಗ್ರಾಮದ ಚಂದ್ರನಾಯ್ಕ ಎಂಬವರ ಮನೆ ಹಿಂಭಾಗದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಂಡುಬಂದಿತು. ಚಂದ್ರನಾಯ್ಕ ಹಾಗೂ ಗ್ರಾಮಸ್ಥರು ವಿಷಯವನ್ನು ಅರಣ್ಯ ಇಲಾಖೆ ಗಮನಕ್ಕೆ ತಂದರು. ತಕ್ಷಣವೇ ಅರಣ್ಯಾಧಿಕಾರಿ, ಸಿಬ್ಬಂದಿ, ಉರಗ ತಜ್ಞರ ಸಮೇತ ನರಿಗಿನಕೆರೆ ಗ್ರಾಮಕ್ಕೆ ಬಂದು, 8 ಅಡಿ ಉದ್ದ, 25 ಕೆಜಿ ತೂಕದ ಭಾರೀ ಗಾತ್ರದ ಹೆಬ್ಬಾವು ರಕ್ಷಿಸಿದರು.
ಕಾಡಂಚಿನ ಗ್ರಾಮಕ್ಕೆ ಆಹಾರ ಅರಸಿ ಬಂದಿದೆ. ನ್ಯಾಮತಿ ಉಪ ವಲಯ ಅರಣ್ಯಾಧಿಕಾರಿ ಶಿವಯೋಗಿ ನೇತೃತ್ವದಲ್ಲಿ ಹೊನ್ನಾಳಿ ಅರಣ್ಯ ರಕ್ಷಕ ವಸಂತ, ನಾಗರಾಜರ ಸಹಕಾರದಿಂದ ಹೆಬ್ಬಾವನ್ನು ಸೆರೆಹಿಡಿದು, ದೂರದ ಗಂಗವ್ವನ ಸರ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು ಎಂದು ಹೊನ್ನಾಳಿ ವಲಯ ಅರಣ್ಯಾಧಿಕಾರಿ ಕಿಶೋರ ನಾಯ್ಕ ಮಾಹಿತಿ ನೀಡಿದ್ದಾರೆ.



