ದಾವಣಗೆರೆ: ಭದ್ರಾ ಜಲಾಶಯ ಪ್ರದೇಶವಾದ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂಗಾರು ಮಳೆ ತಗ್ಗಿದೆ. ಜೂ.28 ರಂದು ಸಾವಿರ 8 ಸಾವಿರ ಕ್ಯೂಸೆಕ್ ಇದ್ದ ಒಳ ಹರಿವು, ಒಂದೇ ದಿನ 2,300 ಕ್ಯೂಸೆಕ್ ಕುಸಿತವಾಗಿದೆ. ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ತುಸು ಆತಂಕ ಮೂಡಿಸಿದೆ.
ಕಳೆದ ವರ್ಷದ ತೀವ್ರ ಬರಗಾಲದಿಂದ 68 ವರ್ಷದಲ್ಲಿಯೇ ಅತಿ ಕಡಿಮೆ ನೀರು ಸಂಗ್ರಹವಾಗಿದ್ದ ಭದ್ರಾ ಜಲಾಯಶ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮ ಆರಂಭ ಪಡೆದಿತ್ತದರೂ, ನಂತರದ 15 ದಿನ ಸಂಪೂರ್ಣ ತಗ್ಗಿತ್ತು. ಎರಡ್ಮೂರು ದಿನ ಉತ್ತಮ ಮಳೆಯಾಗಿ ಮತ್ತೆ ಮಳೆ ತಗ್ಗಿದೆ. ಇದರಿಂದ ರೈತರು ಕಳೆದ ವರ್ಷದ ಸ್ಥಿತಿಯೇ ಈ ವರ್ಷವೂ ಬರಲಿಯೇ ಎನ್ನುವ ಆತಂಕ ಮೂಡಿದೆ.
ತರಿಕೇರಿ ಮತ್ತು ಭದ್ರಾವತಿ ಗಡಿ ಭಾಗದಲ್ಲಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿಯಾಗಿದೆ. ಇಂದಿನ (ಜೂ.29) ನೀರಿನ ಮಟ್ಟ 123.4 ಅಡಿಯಷ್ಟಿದೆ. ಒಳ ಹರಿವು 6,376 ಕ್ಯೂಸೆಕ್ ನಷ್ಟಿದೆ.
- ಭದ್ರಾ ಜಲಾಶಯ ನೀರಿನ ವಿವರ
- ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
- ಗರಿಷ್ಠ : 186 ಅಡಿ
- ಇಂದಿನ ಮಟ್ಟ: 123.4 ಅಡಿ
- ಒಳ ಹರಿವು : 6,376 ಕ್ಯೂಸೆಕ್
- ಹೊರ ಹರಿವು : 346 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 136.11 ಅಡಿ
ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆ ಭದ್ರಾ ಜಲಾಶಯದ ಒಳ ಹರಿವು ತಗ್ಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಸುಮಾರು 2 ಸಾವಿರ ಕ್ಯೂಸೆಕ್ ಒಳ ಹರಿವು ಕಡಿತವಾಗಿದೆ. ಜೂ.24 ರಂದು ಡ್ಯಾಂ ಒಳ ಹರಿವು 771 ಕ್ಯೂಸೆಕ್, 25ರಂದು 1419 ಕ್ಯೂಸೆಕ್ , ಜೂ.26 2276 ಕ್ಯೂಸೆಕ್ ಜೂ.28, 8,655 ಕ್ಯೂಸೆಕ್ ಹಾಗೂ ಇಂದು 6,376 ಕ್ಯೂಸೆಕ್ ಇದೆ.



