ದಾವಣಗೆರೆ; ಜಮೀನನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ ಆರೋಪಿತನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ, 25 ಸಾವಿರ ದಂಡ ವಿಧಿಸಿದೆ.
ಜಿಲ್ಲೆಯ ಜಗಳೂರು ತಾಲ್ಲೂಕು ಲಕ್ಕಂಪುರ ಗ್ರಾಮದ ಈರಪ್ಪ ಬಿನ್ ಕೆಂಗಪ್ಪಗೆ ಸೇರಿದ ಸರ್ವೆ ನಂ 25ರಲ್ಲಿ ಜಮೀನಿನ ಮೇಲೆ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ದಿನಾಂಕ:26-8-2021 ರಂದು ಅಬಕಾರಿ ದಾಳಿ ಮಾಡಲಾಗಿತ್ತು. ಈ ಜಮೀನನಲ್ಲಿ ಅಕ್ರಮವಾಗಿ 3,480 ಕೆ.ಜಿ ಗಾಂಜಾ ಗಿಡಗಳನ್ನು ಬೆಳೆದಿರುವುದು ಕಂಡು ಬಂದಿದ್ದು ಗಾಂಜಾ ಸಮೇತ ಜಮೀನಿನ ಮಾಲೀಕರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ತನಿಖೆಯನ್ನು ಅಬಕಾರಿ ಉಪ ನಿರೀಕ್ಷಕ ಎನ್. ಸಾವಿತ್ರಿ ನಡೆಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸುಧೀರ್ಘ ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶರು ಆರೋಪಿಗೆ ಒಂದು ವರ್ಷ ಶಿಕ್ಷೆ ಮತ್ತು ರೂ.25,000 ದಂಡ ವಿಧಿಸಿದ್ದಾರೆ.
ಈ ದಾಳಿ ವೇಳೆ ಅಬಕಾರಿ ನಿರೀಕ್ಷಕರಾದ ಶೀಲಾ.ಜೆ.ಕೆ, ಹರಿಹರ ವಲಯ ಮತ್ತು ಸಿಬ್ಬಂದಿಗಳಾದ ಅರವಿಂದ ಸಿ.ಜಿ, ಮಂಜುನಾಥ ಹಿರೇಮಠ, ಅಬಕಾರಿ ಹಿರಿಯ ಪೇದೆಯವರು, ಸಹಾಯಕ ನಿರ್ದೇಶಕರಾದ ಬಿ.ಮಹೇಶ್ವರಪ್ಪ, ಜಗಳೂರು ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸ.ಕೆ.ಎಸ್ ಇತರರಿದ್ದರು.