ದಾವಣಗೆರೆ: ಎರಡು ಸಾವಿರ ಲಂಚ ಪಡೆಯುವಾಗ ಪೊಲೀಸ್ ಕಾನ್ಸ್ ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ಪೇದೆ ಹನುಮಂತಪ್ಪ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ನಿಂದ ವಾರೆಂಟ್ ಹೊರಡಿಸುವಂತೆ ಮಾಡಿಸಿ ಅದನ್ನು ಜಾರಿ ಮಾಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಪೊಲೀಸ್ ಪೇದೆಯೊಬ್ಬರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರಸ್ವತಿ ನಗರದ ನಿವೃತ್ತ ಶಿಕ್ಷಕ ಲಕ್ಕಪ್ಪ ಎಂಬವರು ಸೈಯದ್ ತ್ವಾಹಿರುದ್ದೀನ್ ಎಂಬವರ ವಿರುದ್ದ ಸಿವಿಲ್ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ನ್ಯಾಯಾಯಲದಿಂದ ವಾರೆಂಟ್ ಹೊರಡಿಸುವಂತೆ ಮಾಡಿಸಿ ಅದನ್ನು ಜಾರಿ ಮಾಡಲು ಹನುಮಂತಪ್ಪ ಎರಡು ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಕ್ಕಪ್ಪಈ ಸಂಬಂಧ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು.
ಮೇ 31ರಂದು ಆರೋಪಿ ಪೊಲೀಸ್ ಹನುಮಂತಪ್ಪ 2 ಸಾವಿರ ರೂ. ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡು ಸ್ವೀಕರಿಸಿದ ವೇಳೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಕಾರ್ಯಚರಣೆ ಮಾಡಿದ್ದಾರೆ. ಅದರಂತೆ ಆರೋಪಿ ಹನುಮಂತಪ್ಪರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಅಧೀಕ್ಷಕ ಎಂ.ಎಸ್.ಕೌಲಾಪೂರೆ, ಲೋಕಾಯುಕ್ತ ಉಪಾಧೀಕ್ಷಕ ಕಲಾವತಿ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಮಧುಸೂದನ್, ಎಚ್.ಎಸ್.ರಾಷ್ಟ್ರಪತಿ ಮತ್ತು ಸಿಎಚ್ಸಿ ಸಿಬ್ಬಂದಿ ಆಂಜನೇಯ, ಸುಂದರೇಶ್, ಆಶಾ ಸಿಪಿಸಿ ಸಿಬ್ಬಂದಿ ಮಲ್ಲಿಕಾರ್ಜುನ, ಲಿಂಗೇಶ್, ಧನರಾಜ್, ಮಂಜುನಾಥ, ಗಿರೀಶ್, ಬಸವರಾಜ, ಜಂಷಿದಾ ಖಾನಾಂ, ಕೋಟಿನಾಯ್ಕ್, ಬಸವರಾಜ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.