ಡಿವಿಜಿ ಸುದ್ದಿ, ಹಾಸನ: ಹಿಂದಿನ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ಅಷ್ಠಾನಗೊಳಿಸಿರುವ ಕಾಮಗಾರಿ ತಡೆ ಹಿಡಿದಿದ್ದನ್ನು ವಿರೋಧಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆ ಮುಂದೆ ಹಾಸನದ ಎಲ್ಲಾ ಶಾಸಕರು ಪ್ರತಿಭಟನೆ ನಡೆಸುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಕಾಮಗಾರಿ ತಡೆ ಹಿಡಿದಿರುವ ಕುರಿತು ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಎಲ್ಲಾ ಶಾಸಕರು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಆದರೆ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ . ಹೀಗಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ದೇವೇಗೌಡರು ವ್ಯಾಸಂಗ ಮಾಡಿದ ಹಾಸನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 150 ಸೀಟು ಕಡಿಮೆ ಮಾಡಿದ್ದಾರೆ. ಇದಲ್ಲದೆ, ದೇವೇಗೌಡರು ವ್ಯಾಸಂಗ ಮಾಡಿದ ಆ ಕಾಲೇಜು ಮುಚ್ಚಲು ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಯಡಿಯೂರಪ್ಪರವರಿಗೆ ಶಿವಮೊಗ್ಗದಲ್ಲಿ ಕಾಲೇಜು ನಿರ್ಮಿಸಿದ ದೊರೆಸ್ವಾಮಿ ಕೈಯಲ್ಲಿ ಕಾಲೇಜು ಆಡಳಿತ ನಡೆಯುತ್ತಿದೆ. ದೇವೇಗೌಡರು ಸಿಎಂ ಕೈಕಟ್ಟಿ ನಿಲ್ಲುತ್ತಿದ್ದ ದೊರೆಸ್ವಾಮಿಗೆ ಸರ್ಕಾರ ಪಾಲಿಟೆಕ್ನಿಕ್ ಕಾಲೇಜು ಬಳುವಳಿ ಕೊಡಲು ಸಿದ್ಧತೆ ನಡೆಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು



