ದಾವಣಗೆರೆ: ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೃಷಿ ಕೋಟಾದಡಿಯಲ್ಲಿ ಕೃಷಿ ಸಂಬಂಧಿಸಿದ ಪದವಿಗಳಿಗೆ ಪ್ರವೇಶ ಪಡೆಯಲು ಇರುವ ಸಿಇಟಿ ಪರೀಕ್ಷೆಗೆ ಹಾಗೂ ಕೃಷಿ ಪದವಿ ಕೋರ್ಸ್ಗಳ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಏ.22 ರಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಹಿರಿಯ ವಿಜ್ಞಾನಿ, ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ ತಿಳಿಸಿದ್ದಾರೆ.
ಕೃಷಿ ಪದವಿಗಳಿಗೆ ಪ್ರವೇಶ ಬಯಸುವ ಕೃಷಿಕರ ಮಕ್ಕಳಿಗೆ ಶೇಕಡಾ 50ರಷ್ಟು ಮೀಸಲಾತಿ ರಾಜ್ಯ ಸರ್ಕಾರ ನೀಡಿದ್ದು ಇದರ ಸದುಪಯೋಗವನ್ನು ಪಡೆಯಬೇಕೆಂದು ತಿಳಿಸಿದ್ದಾರೆ. ಪ್ರಸ್ತುತ ತರಬೇತಿ ಕಾರ್ಯಕ್ರಮದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ತಯಾರು ಮಾಡುವ ಕುರಿತು, ಸಿಇಟಿ ಮುಂದಿನ ಕ್ರಮಗಳ ಬಗ್ಗೆ ಹಾಗೂ ಕೃಷಿ ಪದವಿಗಳ ನಂತರ ಇರುವ ಅವಕಾಶಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡಲಾಗುವುದು ಎಂದು ಕೇಂದ್ರದ ತೋಟಗಾರಿಕೆ ತಜ್ಞ ಬಸವನಗೌಡ ಎಂ.ಜಿ. ತಿಳಿಸಿದ್ದಾರೆ.
ಈಗಾಗಲೇ ನಮ್ಮಲ್ಲಿ ತರಬೇತಿ ಪಡೆದಿರುವ 284 ವಿದ್ಯಾರ್ಥಿಗಳು ರಾಜ್ಯದ ವಿವಿಧ ಕೃಷಿ, ತೋಟಗಾರಿಕೆ ಮತ್ತು ಪಶು ವಿಜ್ಞಾನ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುತ್ತಾರೆ. ತರಬೇತಿ ಒಂದು ದಿನದ್ದಾಗಿದ್ದು, ಪ್ರವೇಶ ಶುಲ್ಕ ರೂ. 500- ಪಾವತಿಸಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ತರಬೇತಿಯ ಸಂದರ್ಭದಲ್ಲಿ ವಿದ್ಯಾರ್ಥಿಯ ಜೊತೆಗೆ ಒಬ್ಬರು ಪೋಷಕರು ಬಂದರೆ ಸಿಇಟಿಯ ಕ್ರಮಗಳನ್ನು ತಿಳಿದುಕೊಳ್ಳುವುದು ಉತ್ತಮ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 08182-263462, 297142 ಸಂಪರ್ಕಿಸಬಹುದು.



