ದಾವಣಗೆರೆ: ನಗರದ ಎಸ್.ಎಸ್, ರಸ್ತೆಯಲ್ಲಿ ಗೋಲ್ಡನ್ ಸ್ಪೂನ್ ರೆಸ್ಟೋರೆಂಟ್ 2021ರ ಜನವರಿ 7 ರಂದು ಬೆಂಕಿಗೆ ಆಹುತಿಯಾಗಿ ಅನುಭವಿಸಿದ ನಷ್ಟಕ್ಕೆ ವಿಮಾ ಸಂಸ್ಥೆಗಳಾದ ನ್ಯೂ ಇಂಡಿಯಾಮತ್ತು ನ್ಯಾಷನಲ್ ಇನ್ಸೂರೆನ್ಸ್ ವಿಮಾ ಸಂಸ್ಥೆಗಳಿಂದ ನಷ್ಟ ಪರಿಹಾರವಾಗಿ ಒಟ್ಟು ರೂ.42,40,000 ಗಳನ್ನು ವಿಮಾದಾರರಿಗೆ ಕೊಡುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ದಾವಣಗೆರೆ ನಗರದ ಎಸ್.ಎಸ್. ಲೇಔಟ್ನಲ್ಲಿ 2019ರಲ್ಲಿ ಪ್ರಾರಂಭ ಗೋಲ್ಡನ್ ಸ್ಪೂನ್ ರೆಸ್ಟೋರೆಂಟ್ ಬೆಂಕಿಗೆ ಆಹುತಿಯಾಗಿ ಸಂಪೂಣವಾಗಿ ಸುಟ್ಟು ಹೋಗಿತ್ತು. ಈ ರೆಸ್ಟೋರೆಂಟ್ ತನ್ನ ಒಟ್ಟು ಪರಿಕರಗಳ ಮೇಲೆ ನ್ಯೂ ಇಂಡಿಯಾ ಮತ್ತು ನ್ಯಾಷನಲ್ ಇನ್ಸೂರೆನ್ಸ್ ವಿಮಾ ಸಂಸ್ಥೆಗಳಿಂದ ವಿಮೆಗೆ ಒಳಪಟ್ಟಿತ್ತು. ವಿಮಾ ಸಂಸ್ಥೆಗಳು ರೆಸ್ಟೋರೆಂಟ್ ಮಾಲೀಕರ ಅಹವಾಲಿನ ಹೊರತಾಗಿಯೂ ವಿಮಾ ಹಣವನ್ನು ಪಾವತಿಸಲು ನಿರಾಕರಿಸಿದ್ದರಿಂದ ಹೋಟೆಲ್ ಮಾಲೀಕರಾದ ಸುಮ, ಈ ಮೇಲ್ಕಾಣಿಸಿದ 2 ವಿಮಾ ಸಂಸ್ಥೆಗಳ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರನ್ನು ಸಲ್ಲಿಸಿದರು.
ಪ್ರಕರಣದಲ್ಲಿ ಹೋಟೆಲ್ಗೆ ಹಣಕಾಸಿನ ನೆರವು ನೀಡಿದ ಕೆನರಾ ಬ್ಯಾಂಕಿನವರನ್ನೂ ಸಹ ಎದುರುದಾರ ಪಕ್ಷಗಾರರನ್ನಾಗಿ ಸೇರಿಸಲಾಗಿತ್ತು. ಈ ಆಯೋಗದ ನೋಟಿಸ್ಗೆ ಎದುರುದಾರ ವಿಮಾ ಸಂಸ್ಥೆ ಮತ್ತು ಬ್ಯಾಂಕ್ಗಳು ಆಯೋಗದಲ್ಲಿ ತಮ್ಮ ವಕೀಲರ ಮುಖಾಂತರ ಹಾಜರಾಗಿ ತಕರಾರನ್ನು ಸಲ್ಲಿಸಿ 2 ವಿಮಾ ಸಂಸ್ಥೆಗಳು ತಮ್ಮ ಪಾಲಿನ ಒಟ್ಟು ಮೊತ್ತ ರೂ.16,000/-ಗಳು ಮಾತ್ರ ಕೊಡಬಹುದಾಗಿದೆ ಮತ್ತು ಹಣಕಾಸಿನ ನೆರವು ನೀಡಿದ ಕೆನರಾ ಬ್ಯಾಂಕಿಗೆ ಪಾವತಿಸುವುದಾಗಿ ತಕರಾರು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಎದುರುದಾರರ ವಿಮಾ ಸಂಸ್ಥೆಯು, ದೂರುದಾರರು ಕೆನರಾ ಬ್ಯಾಂಕಿನಲ್ಲಿ ಪಡೆದುಕೊಂಡು ಸಾಲಕ್ಕೆ ಭದ್ರತೆಯ ರೂಪದಲ್ಲಿ ವಿಮೆ ನೀಡಿರುವುದರಿಂದ ಈ ವಿಮಾ ಮೊತ್ತ ರೂ.17,00,000/-ಗಳನ್ನು ಬ್ಯಾಂಕಿಗೆ ಜಮಾ ಮಾಡಬೇಕೆಂದು ಮತ್ತು ಇನ್ನೂಳಿದ ಹೋಟೆಲ್ನ ಆಸ್ತಿ-ಪಾಸ್ತಿಯ ಮೇಲೆ ಒಟ್ಟು ರೂ.48,20,000/- ವಿಮೆ ನೀಡಿದ್ದ, 2ನೇ ಎದುರುದಾರ ನ್ಯಾಷನಲ್ ಇನ್ಸೂರೆನ್ಸ್ ವಿಮಾ ಸಂಸ್ಥೆ ದೂರುದಾರರಾದ ಹೋಟೆಲ್ ಮಾಲೀಕರಿಗೆ ಒಟ್ಟು ರೂ.35,40,000/-ಗಳನ್ನು ಪ್ರತಿಶತ 18%ರ ಬಡ್ಡಿ ದರದಂತೆ ಘಟನೆ ನಡೆದ ದಿನದಿಂದ ಕೊಡುವಂತೆ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ತೀರ್ಪು ನೀಡಿ ಆದೇಶಿಸಿದ್ದಾರೆ.



