ದಾವಣಗೆರೆ: ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿ ಪತ್ನಿ ಮೇಲೆ ಲಟ್ಟಾಣಿಗೆ, ಮರದ ತುಂಡಿನಿಂದ ಹಲ್ಲೆ ನಡೆಸಿ ಪತ್ನಿ ಕೊಂದಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ರಮನ್ ಕುಮಾರ್ ಥಾಪಾ(40) ಬಂಧಿತ ಆರೋಪಿಯಾಗಿದ್ದು, ಪ್ರಕರಣ ದಾಖಲಾಗಿ ಒಂದೇ ದಿನದಲ್ಲಿ ಆರೋಪಿ ಬಂಧಿಸಲಾಗಿದೆ.
ಆರೋಪಿ ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಕನಕ ಪೀಠದ ಹತ್ತಿರವಿರುವ ಅಕ್ಷಯ್ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲೇ ಸ್ವಲ್ಪ ದೂರದಲ್ಲಿರುವ ಶಂಷೀರ್ ಅಲಿ ಬಲಿಗೇರ್ ಮನೆಯಲ್ಲಿ ತನ್ನ ಹೆಂಡತಿ ಇಂದ್ರ ಥಾಪ ಹಾಗೂ ಇಬ್ಬರು ಮಕ್ಕಳೊಂದಿಗೆ ರಮನ್ ಕುಮಾರ್ ಥಾಪಾ ವಾಸವಾಗಿದ್ದ. ತನ್ನ ಹೆಂಡತಿಯು ಅನೈತಿಕ ಸಂಬಂಧ ಹೊಂದಿದ್ದಾಳೆಂದು ಪದೇ ಪದೇ ಅನುಮಾನ ಪಡುತ್ತಿದ್ದನು. ಮಾರ್ಚ್ 21 ರಂದು ಮನೆಯಲ್ಲಿದ್ದ ಲಟ್ಟಣಿಕೆ ಮತ್ತು ತರಕಾರಿ ಕತ್ತರಿಸುವ ಮರದ ತುಂಡಿನಿಂದ ತಲೆಗೆ ಹಾಗೂ ಮೈ-ಕೈಗಳಿಗೆ ಹೊಡೆದು ಕೊಲೆ ಮಾಡಿದ್ದ. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹರಿಹರ ಸರ್ಕಲ್ ಇನ್ ಸ್ಪೆಕ್ಟರ್ ಸುರೇಶ ಸಗರಿ, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಮಂಜು ಕುಪ್ಪೆಲೂರು, ಸಿಬ್ಬಂದಿಯವರಾದ ಮಹ್ಮದ್ ಇಲಿಯಾಸ್, ಜಿ.ಎಂ ನಾಗರಾಜ, ಮುರುಳಿಧರ, ಹರಿಹರ ಗ್ರಾಮಾಂತರ ಠಾಣಾ ಸಿಬ್ಬಂದಿ ರಮೇಶ್ ಜಿ.ಎನ್, ನೀಲಮೂರ್ತಿ, ಅರ್ಜುನ್, ಅನಿಲ್ನಾಯ್ಕ, ಸಿದ್ದಪ್ಪ,ಅವರು ಪ್ರಕರಣ ವರದಿಯಾಗಿ ಒಂದೇ ದಿನದಲ್ಲಿ ಪ್ರಕರಣವನ್ನು ಬೇಧಿಸಿ ಆರೋಪಿ ರಮನ್ ಕುಮಾರ್ ಥಾಪ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣ ಬೇಧಿಸಿದ ತಂಡದ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



